April 25, 2011

ಕೃಪಾಕರ್ ಸೇನಾನಿಯವರ ಡಾಕ್ಯುಮೆಂಟರಿ “ದಿ ಪ್ಯಾಕ್”

ಇಂಗ್ಲೀಷಿನಲ್ಲಿ ಧೋಳ್ (Dhole) ಎಂದು ಕರೆಯುವ ಸೀಳು ನಾಯಿಗಳ ಕುರಿತು ಕನ್ನಡದ ಖ್ಯಾತ ವನ್ಯಜೀವಿ ಛಾಯಗ್ರಾಹಕ ಜೋಡಿ ಕೃಪಾಕರ್-ಸೇನಾನಿ ನಿರ್ಮಿಸಿರುವ ಸಾಕ್ಷ್ಯಚಿತ್ರ(ಡಾಕ್ಯುಮೆಂಟರಿ) “ದಿ ಪ್ಯಾಕ್” ೨೦೧೦ರ ಸಾಲಿನ ಗ್ರೀನ್ ಆಸ್ಕರ್ ಪಡೆದುಕೊಂಡಿತು.

ಅಂತರರಾಷ್ಟ್ರೀಯ ಪರಿಸರ ಸಂರಕ್ಷಣ ಒಕ್ಕೂಟ ದಕ್ಷಿಣ ಪೂರ್ವ ಏಶಿಯವನ್ನು ವಾಸಸ್ಥಾನವಾಗಿಸಿಕೊಂಡ ಧೋಳ್ ಜಾತಿಯ ಸೀಳುನಾಯಿಗಳನ್ನು ಅವಸಾನದ ಅಂಚಿನಲ್ಲಿರುವ ಪ್ರಾಣಿಗಳು ಎಂದು ಗುರುತಿಸಿದೆ. ಧೋಳ್, ತೋಳ ಎಂಬ ಪದದಿಂದ ಉತ್ಪತ್ತಿಯಾಗಿರಬಹುದು ಎನ್ನುವ ಅಂದಾಜು ಇದೆ. ಕರ್ನಾಟಕ, ತಮಿಳುನಾಡು, ಕೇರಳಗಳಲ್ಲಿ ವ್ಯಾಪಿಸಿರುವ ನೀಲಗಿರಿ ಬೆಟ್ಟದ ತಪ್ಪಲಿನ ದಟ್ಟವಾದ ಅರಣ್ಯಗಳಲ್ಲಿ ಕಂಡು ಬರುವ ಸೀಳುನಾಯಿಗಳು ಕುಗ್ಗುತ್ತಿರುವ ಅರಣ್ಯ ಪ್ರದೇಶ, ಬೇಟೆಯ ಅಭಾವ, ರೋಗ ರುಜಿನಗಳು ಅಲ್ಲದೆ ಬೇಟೆಗಾರರ ಹಾವಳಿಯಿಂದ ಅಳಿವಿನ ಅಂಚಿನಲ್ಲಿ ಜೀವನ ದೂಡುತ್ತಿವೆ.

ಸೀಳುನಾಯಿಗಳ ವರ್ತನೆ, ಸಾಮಾಜಿಕ ಜೀವನವನ್ನು ಆಧರಿಸಿ ಕೃಪಾಕರ್ ಹಾಗೂ ಸೇನಾನಿ ನಿರ್ಮಿಸಿದ ನೂರ ಐವತ್ತು ನಿಮಿಷಗಳ ಸಾಕ್ಷ್ಯಚಿತ್ರವೇ “ದಿ ಪ್ಯಾಕ್”. ನ್ಯಾಶನಲ್ ಜಿಯಾಗ್ರಫಿಕ್, ಅನಿಮಲ್ ಪ್ಲಾನೆಟ್ ಮೊದಲದಾದ ಟಿವಿ ವಾಹಿನಿಗಳಲ್ಲಿ ನೀವು ವನ್ಯಜೀವಿಗಳಿಗೆ ಸಂಬಂಧಿಸಿದ ಸಾಕ್ಷ್ಯಚಿತ್ರಗಳನ್ನು ಗಮನಿಸಿರಬಹುದು. ಇಂತಹ ಸಾಕ್ಷ್ಯಚಿತ್ರಗಳು ತಮ್ಮ ಉತ್ಕೃಷ್ಟ ತಾಂತ್ರಿಕ ಗುಣಮಟ್ಟದಿಂದ ನಮ್ಮ ಗಮನ ಸೆಳೆಯುವುದು ಹೆಚ್ಚು. ಎಲ್ಲೋ ಕೆಲವು ಕೃತಿಗಳಲ್ಲಿ ತಾಂತ್ರಿಕತೆಯ ಜೊತೆ ನವಿರಾಗಿ ಕಥನವನ್ನು ಹೆಣೆಯುವ ಕೌಶಲ್ಯ ಮೇಳೈಸಿರುತ್ತದೆ. ಇಂತಹ ಅಪರೂಪದ ಚಿತ್ರಗಳ ಸಾಲಿಗೆ “ದಿ ಪ್ಯಾಕ್” ಸೇರುತ್ತದೆ.

ಮೊದಲೇ ಚಿತ್ರಕತೆ ಸಿದ್ಧ ಪಡಿಸಿಕೊಂಡು ಪಳಗಿದ “ಮನುಷ್ಯ” ನಟರನ್ನು ಬಳಸಿ ಮಾಡಿದ ಸಿನೆಮಗಳೇ ಜನಮನವನ್ನು ಗೆಲ್ಲುವುದರಲ್ಲಿ ಅನೇಕ ಬಾರಿ ಸೋಲುತ್ತವೆ. ಹೀಗಿರುವಾಗ ಚಿತ್ರೀಕರಣವೆಂಬುದೇ ಅಪಾಯಕಾರಿ ಸವಾಲು ಎನ್ನುವಂತಹ ದಟ್ಟ ಕಾಡಿನಲ್ಲಿ, ಕಾಡಿನಷ್ಟೇ ನಿರ್ದಯವಾದ ಕಾಡು ಪ್ರಾಣಿಗಳನ್ನೇ ಬಳಸಿ ಚಿತ್ರ ನಿರ್ಮಿಸುವುದು, ಆ ಚಿತ್ರದಲ್ಲಿ ಮನುಷ್ಯನ ಮನಸ್ಸು ಮಿಡಿಯುವಂತಹ ಕಥನವೊಂದನ್ನು ಹೆಣೆಯುವುದು ನಿಜಕ್ಕೂ ದೊಡ್ಡ ಸಾಧನೆ. ಈ ಕಾರಣಕ್ಕಾಗಿಯೇ ಕೃಪಾಕರ್ ಸೇನಾನಿಯವರ “ದಿ ಪ್ಯಾಕ್” ಅಂತರಾಷ್ಟ್ರೀಯ ಖ್ಯಾತಿಯನ್ನು ಗಳಿಸಿರುವುದು.
the pack, documentary, krupakar senani, nilgiri hills
“ದಿ ಪ್ಯಾಕ್” ಕೆನ್ನಾಯಿ (ಕೆಂಪು ನಾಯಿ) ಎಂದೂ ಕರೆಯಲ್ಪಡುವ ಸೀಳುನಾಯಿಯೊಂದರ ಜೀವನ ಕತೆ. ದಿಟ್ಟೆಯಾದ ಒಂದು ಹೆಣ್ಣು ನಾಯಿಯ ಬದುಕು, ಅದರ ವರ್ತನೆ ಸೇನಾನಿಯವರ ಕುತೂಹಲವನ್ನು ಕೆರಳಿಸುತ್ತದೆ. ಆ ನಾಯಿಯನ್ನು ಹಿಂಬಾಲಿಸಿ, ಅದರ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಅರ್ಥೈಸಿಕೊಳ್ಳುತ್ತ, ನಾಯಿಯ ಭಾವನೆಗಳು ವ್ಯಕ್ತವಾಗುವಂತೆ ಚಿತ್ರೀಕರಣ ನಡೆಸುತ್ತಾ ಹೋಗುತ್ತಾರೆ ಕೃಪಾಕರ್ ಹಾಗೂ ಸೇನಾನಿ.

ಚಿತ್ರದ ನಾಯಕಿ ತುಂಬಾ ಚಿಕ್ಕದಿರುವಾಗ ಹುಲಿಯೊಂದು ಅದರ ತಾಯಿಯನ್ನು ಕೊಂದು ಬಿಡುತ್ತದೆ. ಆಗ ಈಕೆ ತನ್ನ ಪಂಗಡ(ಪ್ಯಾಕ್) ತೊರೆಯುವ ನಿರ್ಧಾರ ಮಾಡುತ್ತಾಳೆ. ತಾಯಿಯನ್ನು ಕಳೆದುಕೊಂಡು ಒಬ್ಬಂಟಿಯಾಗಿ ತನ್ನ ಭವಿಷ್ಯವನ್ನು ಅರಸಿಕೊಂಡು ಅಪಾಯಗಳಿಂದ ಕೂಡಿದ ದಟ್ಟ ಕಾಡಿನಲ್ಲಿ ಹೊರಡುತ್ತಾಳೆ.

ಹೀಗೆ ಹೊರಟ ಕೆನ್ನಾಯಿ ತಾನು ಬದುಕು ಉಳಿಯುವುದಷ್ಟೇ ಅಲ್ಲದೆ, ತನ್ನದೇ ಒಂದು ಪಂಗಡವನ್ನು ಕಟ್ಟಿಕೊಳ್ಳುವುದರಲ್ಲಿ ಯಶಸ್ವಿಯಾಗುವುದೇ ಚಿತ್ರದ ಕತೆ. ಯಶಸ್ಸಿನ ಹಾದಿಯಲ್ಲಿ ಆಕೆ ತನ್ನ ಪ್ರಿಯಕರರನ್ನು, ಕೆಲವು ಮರಿಗಳನ್ನು ಕಳೆದುಕೊಳ್ಳುತ್ತಾಳೆ. ಹುಲಿಯೊಂದಿಗೆ ಸೆಣಸಿ ಜೀವ ಉಳಿಸಿಕೊಳ್ಳುತ್ತಾಳೆ. ಉಳಿದ ಪಂಗಡಗಳ ದಾಳಿಯನ್ನು ಸಮರ್ಥವಾಗಿ ಎದುರಿಸುತ್ತಾಳೆ. ಬೆಂಕಿಯೊಂದಿಗೆ ಹೋರಾಡುತ್ತಾಳೆ, ಕಡೆಗೆ ತಿರುಗಿ ಬಿದ್ದ ತನ್ನದೇ ಮಗಳೊಂದಿಗೂ ಮುಖಾಮುಖಿಯಾಗುತ್ತಾಳೆ. ಆದರೆ ಮನುಷ್ಯ ಲೋಕಕ್ಕೇ ಮಾದರಿಯಾಗಬಹುದಾದ ಅಪೂರ್ವವಾದ ತಾಳ್ಮೆಯಲ್ಲಿ, ಅದಮ್ಯ ಜೀವನೋತ್ಸಾಹದಲ್ಲಿ ಆಕೆ ಎಲ್ಲವನ್ನೂ ಸಹಿಸಿ ಜೀವಿಸುತ್ತಾಳೆ.

ಪ್ರಾಣಿಗಳ ಮನೋಲೋಕದ ಚಟುವಟಿಕೆಗಳ ಮೇಲೆ ತುಂಬಾ ಪ್ರಖರವಾದ ನೋಟವನ್ನು ಚೆಲ್ಲುವಂತಹ ಈ ಚಿತ್ರ ವನ್ಯಜೀವಿಗಳ ಕುರಿತು ಆಸಕ್ತಿಯಿರುವ ಚಿತ್ರರಸಿಕರನ್ನಷ್ಟೇ ಅಲ್ಲದೆ ಪ್ರಾಣಿಗಳ ವರ್ತನೆಯನ್ನು ಅಧ್ಯಯನ ಮಾಡುವ ವಿಜ್ಞಾನಿಗಳ ಗಮನವನ್ನೂ ಸೆಳೆದಿದೆ.

ಒಂದೆಡೆ ನಮ್ಮ ಟಿವಿ ಚಾನಲುಗಳು ಉತ್ತಮವಾದ ಹಣಕಾಸು ವ್ಯವಸ್ಥೆ, ಪ್ರತಿಭಾವಂತ ಮಾನವ ಸಂಪನ್ಮೂಲ, ವಿಶಾಲವಾದ ಪ್ರೇಕ್ಷಕ ವರ್ಗ ಇವೆಲ್ಲ ಇದ್ದಾಗ್ಯೂ ಇಂಗ್ಲೀಷಿನಿಂದ, ಹಿಂದಿಗೆ ಆಮದಾಗಿ ಥರ್ಡ್ ಹ್ಯಾಂಡ್ ಎನ್ನಬಹುದಾದ ಕಾನ್ಸೆಪ್ಟುಗಳನ್ನು ಇಲ್ಲಿಗೆ ಒಗ್ಗಿಸಿ ಸುಲಭಕ್ಕೆ ತಯಾರಿಸುವ ರಿಯಾಲಿಟಿ ಶೋಗಳು, ಸಾಮಾಜಿಕ ಜವಾಬ್ದಾರಿಯಿಲ್ಲದೆ ಮೌಢ್ಯ, ವದಂತಿಯನ್ನು ಹಬ್ಬುವ ಜೋತಿಷ್ಯ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿವೆ. ಇವುಗಳ ನಡುವೆಯೇ ಕಳೆದು ಹೋದ ಪ್ರೇಕ್ಷಕ ಕನ್ನಡದ ನೆಲದಲ್ಲಿ ಉತ್ಕೃಷ್ಟವಾದ, ಅವರಿವರ ನಕಲು ಅಲ್ಲದ ಸ್ವಂತಿಕೆ ಇರುವ ಸಿನೆಮ, ಟಿವಿ ಕಾರ್ಯಕ್ರಮ ಮೂಡಿ ಬರಲು ಸಾಧ್ಯವೇ ಇಲ್ಲ ಎಂದು ಸಿನಿಕತನಕ್ಕೆ ಜಾರುತ್ತಿರುವ ಸಂದರ್ಭದಲ್ಲಿ ಕೃಪಾಕರ್-ಸೇನಾನಿಯಂತಹ ಕನ್ನಡಿಗರ ಪರಿಶ್ರಮ ಹೊಸ ಆಶಾಕಿರಣವಾಗಿ ಕಾಣುತ್ತದೆ. ಅವರಿಗೆ ಅಭಿನಂದನೆಗಳು!

January 12, 2011

ಸ್ವತಂತ್ರ ಆಯ್ಕೆಯ ಭ್ರಮೆಯಲ್ಲಿರುವ ಗೀತಾಳ ಗೆಲುವು ಎಲ್ಲಿದೆ?

(ಸಂವಾದ ಡಾಟ್ ಕಾಮ್ ಆಯೋಜಿಸಿದ್ದ ಕೃಷ್ಣನ್ ಲವ್ ಸ್ಟೋರಿ ಸಿನೆಮಾ ಕುರಿತ ವಿಮರ್ಶೆ ಸ್ಪರ್ಧೆಗೆ ಕಳುಹಿಸಿದ್ದ ಬರಹ )


 

ರುಪಾಯಿ ನಾಣ್ಯ ಮೇಲಕ್ಕೆ ಚಿಮ್ಮಲ್ಪಡುತ್ತದೆ. ಕ್ರಿಕೆಟ್ ಆಟ ಶುರುವಾಗುತ್ತದೆ. ಬೈಕುಗಳಲ್ಲಿ ಬಂದ ಸಣ್ಣ ಬಟ್ಟೆ ವ್ಯಾಪಾರ ಮಾಡುವ ಹುಡುಗರ ತಂಡಕ್ಕೆ ಕೃಷ್ಣ ನಾಯಕ. ಕಾರುಗಳಲ್ಲಿ ಬರುವ ಶ್ರೀಮಂತ ಹುಡುಗರ ತಂಡಕ್ಕೆ ನರೇಂದ್ರ ನಾಯಕ. ಇವರಿಬ್ಬರು ಇದೇ ಮೊದಲ ಸಲ ಕ್ರಿಕೆಟ್ ಆಡುತ್ತಿರುವುದೇನಲ್ಲ. ಇವರು ಕ್ರಿಕೆಟ್ ಆಡುವುದೂ ಇಂಥದ್ದೇ ಎನ್ನುವ ಕಾರಣಕ್ಕೆ ಅಲ್ಲ. ಕೆಲವೊಮ್ಮೆ ದುಡ್ಡಿಗಾಗಿ, ಕ್ರೇಜಿಗಾಗಿ, ಟೈಂಪಾಸಿಗಾಗಿ; ಇನ್ನು ಕೆಲವೊಮ್ಮೆ ಸೇಡಿಗಾಗಿ, ಪ್ರೆಸ್ಟೀಜಿಗಾಗಿ. ಇವರಿಬ್ಬರ ನಡುವೆ ದೋಸ್ತಿ ಎನ್ನುವುದು ಇರುವುದು ಬೆಟ್ಟಿಂಗ್ ಕಟ್ಟಿ ಕ್ರಿಕೆಟ್ ಆಡುವುದು, ಆಟದಲ್ಲಿ ಗೆಲ್ಲುವುದಕ್ಕೆ ಹೊಡೆದಾಟ, ಮೋಸದಿಂದ ಹಿಡಿದು ಎಲ್ಲಾ ಪ್ರಯತ್ನಗಳನ್ನು ಮಾಡುವುದರಲ್ಲಿ.

ಒಂದು ಆಟ ಶುರುವಾಗುತ್ತದೆ. ಇಂಡಿಯಾದಲ್ಲಿ ಗಲ್ಲಿ ಗಲ್ಲಿಗಳಲ್ಲಿ ನಡೆಯುವ ಬೆಟ್ಟಿಂಗ್ ಕ್ರಿಕೆಟ್ ನಂತೆಯೇ ಆಟ. ಕೃಷ್ಣ ಸಿಕ್ಸರುಗಳನ್ನು ಚಚ್ಚುತ್ತಾನೆ, ನರೇಂದ್ರ ಬೌಲ್ ಮಾಡುತ್ತಾನೆ. ಕೃಷ್ಣ ಬೌಲ್ ಮಾಡುತ್ತಾನೆ, ನರೇಂದ್ರ ರನ್ ಗಳಿಸುತ್ತಾನೆ. ಆ ಒಂದು ಆಟದಲ್ಲಿ ಕೃಷ್ಣ ಗೆಲ್ಲುತ್ತಾನೆ. ಎರಡೂ ತಂಡಗಳು ಹೊಡೆದಾಟಕ್ಕಿಳಿದು ಗುದ್ದಿಕೊಂಡು, ಚಚ್ಚಿಕೊಂಡು, ಒಬ್ಬರನ್ನು ಒಬ್ಬರು ನೆಲದ ಮೇಲೆ ಕೆಡವಿಕೊಂಡು ಬಡಿದಾಡುತ್ತಾರೆ. ಈ ನಡುವೆ ಇಷ್ಟು ಹಣ ಕೊಟ್ಟರೆ ತಾನು ಸೋತೆ ಎಂದು ಒಪ್ಪಿಕೊಳ್ಳುವುದಕ್ಕೆ ತಯಾರು ಎನ್ನುತ್ತಾನೆ ಕೃಷ್ಣ. ತಾನು ಗೆಲ್ಲುವುದಕ್ಕೆಂದು ಆಡಿದ ಆಟದಲ್ಲಿ ಗೆದ್ದರೂ ತಾನು ಸೋತೆ ಎಂದು ಒಪ್ಪಿಕೊಳ್ಳುವುದಕ್ಕೆ ಆತ ನೀಡುವ ಸಮರ್ಥನೆ: ಜೀವನದಲ್ಲಿ ಹೆಸರು ಮಾಡುವುದು ಮುಖ್ಯವೋ, ಬಸಿರು ಮಾಡುವುದು ಮುಖ್ಯವೋ (ಸೆನ್ಸಾರ್ ನವರ ಕೃಪೆಯಿಂದ ‘ಬಸಿರು’ ಸಿನೆಮಾದಲ್ಲಿ ಮಾಯವಾಗುತ್ತದೆ) ಎಂದು.

ಆಟವನ್ನು ಆಡಿ ಅದರಲ್ಲಿ ಗೆದ್ದು ಆ ಗೆಲುವನ್ನು ಮಾರಿಕೊಂಡು ಅದನ್ನು ತನ್ನ ಬುದ್ಧಿವಂತಿಕೆಯ, ತನ್ನ ಸಾಮರ್ಥ್ಯದ, ತನ್ನ ಸ್ಟ್ರೀಟ್ ಸ್ಮಾರ್ಟ್ ನೆಸ್ ನ ಎವಿಡೆನ್ಸ್ ಎನ್ನುವ ಹಾಗೆ ಕೃಷ್ಣ ಬೀಗುತ್ತಾ ಹೋಗುತ್ತಾನೆ. ಆಟವನ್ನು ಗೆಲ್ಲುವುದಕ್ಕೆಂದೇ ಆಡಿ ಅದರಲ್ಲಿ ಸೋತರೂ ತನ್ನ ಹಣದ ಬಲದಿಂದ ಗೆಲುವನ್ನು ದಕ್ಕಿಸಿಕೊಂಡ ಸಂತೃಪ್ತಿಯಲ್ಲಿ ನರೇಂದ್ರ ನಿರ್ಗಮಿಸುತ್ತಾನೆ. ಕೃಷ್ಣ ಹಾಗೂ ನರೇಂದ್ರನ ನಡುವೆ ನಡೆದ ಒಳ ಒಪ್ಪಂದ ಪ್ರೇಕ್ಷಕರಿಗೆ ಕಂಡು ಬಿಡುವುದರಿಂದ ಇದನ್ನು ಪ್ರೇಕ್ಷಕನು ಅಷ್ಟು ಗಂಭೀರವಾಗಿ ಪರಿಗಣಿಸುವುದಿಲ್ಲ.

ಆಟವೆಂದರೆ ಎರಡು ತಂಡಗಳು ಸಮಾನವಾದ ವೇದಿಕೆಯಲ್ಲಿ ತಮ್ಮ ಕೌಶಲ್ಯ, ಶಕ್ತಿಯನ್ನು ಪ್ರದರ್ಶಿಸಿ ಸಮರ್ಥವಾದ ತಂಡ ಗೆಲುವು ಸಾಧಿಸುವುದು. ಒಬ್ಬನು ಗೆದ್ದ ಎಂದರೆ ಮತ್ತೊಬ್ಬನು ಸೋತ ಎನ್ನುವುದು ಆಟದ ನಿಯಮ. ಇದನ್ನು ಒಪ್ಪಿಕೊಂಡು ಆಡಿದರೆ ಮಾತ್ರ ಆಟದಲ್ಲಿ ಆಸಕ್ತಿ ಇರುತ್ತದೆ, ಅದು ಆಟ ಎಂದು ಕರೆಸಿಕೊಳ್ಳುತ್ತದೆ.

ಆದರೆ ಈ ಘಟನೆಯಲ್ಲಿ ಕೃಷ್ಣ ಹಾಗೂ ನರೇಂದ್ರ ಆಟದ ದಿಕ್ಕು ದಿಸೆಯನ್ನೇ ಬದಲಾಯಿಸಿಬಿಡುತ್ತಾರೆ. ಒಂದೇ ಮೈದಾನದಲ್ಲಿ ಒಂದೇ ಆಟವನ್ನು ಆಡಿದರೂ ಇಬ್ಬರೂ ಗೆಲ್ಲಬಹುದಾದ ಮಾರ್ಗವನ್ನು ಹುಡುಕಿಕೊಳ್ಳುತ್ತಾರೆ. ಕೃಷ್ಣ ‘ಬಸಿರ’ನ್ನು ಮಾಡಿದ ತೃಪ್ತಿಯಲ್ಲಿ ಗೆಲುವು ಕಂಡರೆ ನರೇಂದ್ರ ಹೆಸರು ಗಳಿಸಿ ಗೆದ್ದೆ ಎಂದುಕೊಳ್ಳುತ್ತಾನೆ. ನಿಜದ ಕ್ರಿಕೆಟ್ ಆಟದಲ್ಲಿನ ಸೋಲು ಗೆಲುವು ಅವರ ದೃಷ್ಟಿಯಲ್ಲಿ ಸೋಲು ಗೆಲುವು ಅಲ್ಲವೇ ಅಲ್ಲ. ಇಬ್ಬರಲ್ಲಿ ಯಾರು ಕ್ರಿಕೆಟ್ನಲ್ಲಿ ಗೆದ್ದಿದ್ದರೂ ಅವರು ಇಬ್ಬರೂ ಗೆಲ್ಲಬಹುದಾದ ಒಪ್ಪಂದಕ್ಕೆ ಬಂದು ಬಿಡುತ್ತಿದ್ದರು. ಅಂದರೆ ಮಧ್ಯಮ ವರ್ಗದ ಕೃಷ್ಣ ಹಾಗೂ ಶ್ರೀಮಂತ ವರ್ಗದ ನರೇಂದ್ರ ಇಬ್ಬರೂ ಗೆಲುವಿನ ಸಂಭ್ರಮವನ್ನು, ಸಂತೃಪ್ತಿಯನ್ನು ಪಡೆಯುವುದಕ್ಕೆ ಕ್ರಿಕೆಟ್ ಆಟವನ್ನು ನೆಪವಾಗಿಸಿಕೊಂಡರು.

***

ಕೃಷ್ಣ ಹಾಗೂ ನರೇಂದ್ರ ಇನ್ನೊಂದು ಸಂದರ್ಭದಲ್ಲಿ ಮುಖಾಮುಖಿಯಾಗುತ್ತಾರೆ. ಇಬ್ಬರೂ ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ದುಡಿಯುವ ಕೆಳವರ್ಗದ ತಾಯಿಯ ಮಗಳಾದ  ಗೀತಾ ಎನ್ನುವ ಹುಡುಗಿಯನ್ನು ಪ್ರೀತಿಸಲು ಶುರು ಮಾಡಿರುತ್ತಾರೆ. ಈ ಬಾರಿಯೂ ಇಬ್ಬರೂ ಬೆಟ್ ಕಟ್ಟುತ್ತಾರೆ. ಕ್ರಿಕೆಟ್ ಬದಲಾಗಿ ಇಲ್ಲಿ ಬೆಟ್ಟಿಂಗಿಗೆ ಗೀತಾ ಬಳಸಲ್ಪಡುತ್ತಾಳೆ. ಬೆಟ್ಟಿನಲ್ಲಿ ಗೆದ್ದವರು ಗೀತಾಳನ್ನು ಮದುವೆಯಾಗಬಹುದು (‘ಹೊಂದಬಹುದು’ ಎನ್ನುವುದು ಸೂಕ್ತವೇನೋ!), ಗೀತಾ ತಾನಾಗಿ ಯಾರ ಪ್ರೀತಿಯನ್ನು ಒಪ್ಪಿಕೊಳ್ಳುತ್ತಾಳೋ ಅವರು ಗೆದ್ದಂತೆ ಎನ್ನುವ ಒಪ್ಪಂದಕ್ಕೆ ಬರುತ್ತಾರೆ.

ಅಲ್ಲಿಂದ ಇನ್ನೊಂದು ಆಟ ಶುರುವಾಗುತ್ತದೆ.

ನರೇಂದ್ರ ತನ್ನ ಹಣ, ತನ್ನಪ್ಪನ ಹೊಟೇಲು, ಕಾರು, ದುಬಾರಿ ಮೊಬೈಲುಗಳಿಂದ ತನ್ನ ಕಡೆಯ ಆಟವನ್ನು ಆಡುತ್ತಾನೆ. ಇತ್ತ ಕೃಷ್ಣ ತನ್ನ ಮುಗ್ಧತೆ, ತನ್ನ ಪ್ರೀತಿಯ ವೈಶಾಲ್ಯಗಳನ್ನು ಪಣಕ್ಕೊಡ್ಡುತ್ತಾನೆ

ಗೀತಾಳ ತಾಯಿ ಆಸ್ಪತ್ರೆ ಸೇರಿಕೊಂಡಾಗ ಹೂವಿನ ಬೊಕೆ, ‘ಗೆಟ್ ವೆಲ್ ಸೂನ್ ಆಂಟಿ’ ಎನ್ನುವ ಕಾಳಜಿ ತುಂಬಿದ ಶುಭಾಶಯ,  ಆಸ್ಪತ್ರೆಯಲ್ಲಿ ಉತ್ತಮ ವ್ಯವಸ್ಥೆಗಾಗಿ  ಬಳಸಬಹುದಾದ ತನ್ನ ಅಧಿಕಾರ ಇವುಗಳನ್ನು ಪರೀಕ್ಷೆಗೊಡ್ಡುತ್ತಾನೆ ನರೇಂದ್ರ. ಇತ್ತ ಕೃಷ್ಣ ಆಕೆಯೊಂದಿಗೇ ಇದ್ದು ಭದ್ರತೆಯ ಭಾವ ದೊರಕಿಸಿಕೊಡುತ್ತಾನೆ. ಆಕೆ ಅಳುತ್ತ ಒರಗಬಹುದಾದ ಹೆಗಲಾಗುತ್ತಾದೆ.

ನರೇಂದ್ರ ತನ್ನಪ್ಪನ ಹೊಟೇಲಿಗೆ ಬಂದ ಗೀತಾಳಿಗೆ ಬಿಲ್ ಮಾಫಿ ಮಾಡಲು ನಿರಾಕರಿಸಿ ಆಕೆಯ ಸ್ವಾಭಿಮಾನವನ್ನು ಗೌರವಿಸುತ್ತಾನೆ. ಆಕೆಗೆ ಇಷ್ಟವಾಗುವುದಿಲ್ಲ ಎಂದು ತನ್ನನ್ನು ತಾನು ತಿದ್ದಿಕೊಂಡು ವರ್ತಿಸುತ್ತಾನೆ. ಇತ್ತ ಕೃಷ್ಣ ತನ್ನ ಮುಗ್ಧತೆ, ತನ್ನ ಪ್ರೀತಿಯ ವೈಶಾಲ್ಯಗಳನ್ನು ಪಣಕ್ಕೊಡ್ಡುತ್ತಾನೆ. ಬೀದಿ ಮಕ್ಕಳಿಗೆ ಕಾಫಿ ಡೇನಲ್ಲಿ ಐಸ್ ಕ್ರೀಮು ಕೊಡಿಸುತ್ತಾನೆ, ರೌಡಿಗಳನ್ನು ಚಚ್ಚಿ ಗೀತಾಳ ಮಾನ ರಕ್ಷಣೆ ಮಾಡುತ್ತಾನೆ, ಗೀತಾಳ ತಾಯಿಯ ಎದುರು ಸಭ್ಯ ಹುಡುಗನೆನ್ನಿಸಿಕೊಳ್ಳುತ್ತಾನೆ. ಗೀತಾಳ ತಾಯಿ ಆಸ್ಪತ್ರೆ ಸೇರಿದಾಗ, ಆಕೆಯನ್ನು ಪರೀಕ್ಷಾ ಕೇಂದ್ರಕ್ಕೆ ತಲುಪಿಸಿ ಬರುವಾಗ ಆಕೆಯ ಓದು, ಭವಿಷ್ಯ, ಸ್ವಾಭಿಮಾನದ ಬಗ್ಗೆ ತನಗಿರುವ ಕಾಳಜಿಯನ್ನು ವ್ಯಕ್ತ ಪಡಿಸುತ್ತಾನೆ.

ಆಟವು ಕುತೂಹಲದ ಘಟ್ಟವನ್ನು ತಲುಪಿಕೊಳ್ಳುತ್ತದೆ.

ಕೃಷ್ಣನು ಗೀತಾಳಿಗೆ ಪ್ರಪೋಸ್ ಮಾಡಿಯೇ ಬಿಡುತ್ತಾನೆ. ಆಕೆ ಆತನನ್ನು ಕಣ್ಣಲ್ಲಿ ದಿಟ್ಟಿಸುತ್ತಾ ತಾನು ಪ್ರೀತಿ ಗೀತಿಯಲ್ಲಿ ನಂಬಿಕೆಯಿಟ್ಟಿಲ್ಲ. ತನ್ನ ಓದು ಮುಗಿಯುವವರೆಗೆ ಯಾವ ಅಪ್ಲಿಕೇಶನ್ನನ್ನೂ ಒಪ್ಪುವುದಿಲ್ಲ ಎನ್ನುತ್ತಾಳೆ.

ತನ್ನ ಅಪ್ಲಿಕೇಶನ್ ತಿರಸ್ಕರಿಸಲ್ಪಟ್ಟಿತು ಎಂದಾಗ ಕೃಷ್ಣ ಕುಸಿದು ಹೋಗುವುದಿಲ್ಲ. ಪ್ರೀತಿ ಕೈಗೆ ಸಿಕ್ಕಲಿಲ್ಲ ಎಂಬ ನಿರಾಶೆಯಲ್ಲಿ ಕೊರಗುವುದಿಲ್ಲ. ಬದಲಾಗಿ ತನ್ನ ಗೆಳೆಯರಿಗೆ ಎಣ್ಣೆ ಪಾರ್ಟಿ ಕೊಡಿಸುತ್ತಾನೆ. ಸಂಭ್ರಮದಿಂದ ಇರುತ್ತಾನೆ. ಈ ಸಂಭ್ರಮಕ್ಕೆ ಗೆಳೆಯರು ಕಾರಣ ಕೇಳುತ್ತಾರೆ, ಆತ ಹೇಳುತ್ತಾನೆ, ಗೀತಾ ತನ್ನೊಬ್ಬಳ ಅಪ್ಲಿಕೇಶನ್ ತಿರಸ್ಕರಿಸಲಿಲ್ಲ, ಯಾರ ಅಪ್ಲಿಕೇಶನ್ನೂ ಒಪ್ಪಿಕೊಳ್ಳುವುದಿಲ್ಲ ಎಂದಳು ಎನ್ನುತ್ತಾನೆ. ಇಲ್ಲಿ ನಾನೊಬ್ಬನೇ ಸೋತದ್ದಲ್ಲ, ನರೇಂದ್ರನೂ ಸೋತ ಎಂದು ತಿಳಿಯುವುದರಲ್ಲಿ ಕೃಷ್ಣನಿಗೆ ಸಂಭ್ರಮವಿದೆ. ಕ್ರಿಕೆಟ್ ನಲ್ಲಿ ಇಬ್ಬರೂ ಗೆಲ್ಲಬಹುದಾದ ಒಪ್ಪಂದ ಮಾಡಿಕೊಳ್ಳುವುದಕ್ಕೂ ಇದೂ ಮನಸ್ಥಿತಿ ಕಾರಣ.

***

ಕೃಷ್ಣ ಹಾಗೂ ನರೇಂದ್ರರ ಮಧ್ಯೆ ತಾನು ಬೆಟ್ಟಿಂಗ್ ಕ್ರಿಕೆಟ್ ಆಗಿದ್ದೇನೆ. ತನಗೆ ತೋರಿಸಲ್ಪಡುತ್ತಿರುವ ಪ್ರೀತಿ, ಕಾಳಜಿಗಳು ಅವರಿಬ್ಬರ ಆಟದ ಮೈದಾನವಾಗಿದೆ ಎನ್ನುವುದರ ಅರಿವಿಲ್ಲದ ಗೀತಾ ಇಡೀ ವ್ಯವಹಾರ ತನ್ನ ನಿಯಂತ್ರಣದಲ್ಲೇ ಇದೆ ಎಂದು ಭಾವಿಸುತ್ತಾಳೆ.

ವ್ಯಕ್ತಿಗತವಾಗಿ ತುಂಬ ಸ್ವಾಭಿಮಾನಿಯಾದ ಗೀತಾ ತಾನು ಸ್ವತಂತ್ರವಾಗಿ ಬದುಕನ್ನು ಕಟ್ಟಿಕೊಳ್ಳಬಲ್ಲೆ ಎಂದುಕೊಂಡಿರುತ್ತಾಳೆ. ಆಕೆಗೆ ತನ್ನ ವಾಸ್ತವದ ಅರಿವಿದೆ. ತಾನು ಬಡತನದಲ್ಲಿ ಸಿಲುಕಿಕೊಂಡಿದ್ದೇನೆ ಎಂಬ ಅರಿವು ಆಕೆಗಿದೆ. ಆದರೆ ಆಕೆಯ ತಾಯಿಯ ಹಾಗೆ ಅವಳು ಬಡವಳು ಅಲ್ಲ. ಬಡತನವನ್ನು ಒಪ್ಪಿಕೊಂಡವಳು ಅಲ್ಲ. ಕೆಳವರ್ಗದ ಸದಸ್ಯಳು ಅಲ್ಲ. ತಾನು ಶಾಪಗ್ರಸ್ತ ಅಪ್ಸರೆ, ತನಗೆ ಒಂದು ದಿನ ಶಾಪದಿಂದ ವಿಮುಕ್ತಿ ಸಿಕ್ಕುತ್ತದೆ ಅಲ್ಲಿಯವರೆಗೆ ತಾನು ತನ್ನ ಕನಸುಗಳನ್ನು ಕೊಂದುಕೊಂಡು ಬದುಕಬೇಕು ಎಂದು ಭಾವಿಸಿಕೊಂಡಿರುತ್ತಾಳೆ. ಹೀಗಾಗಿಯೇ ಆಕೆಗೆ ಬಡತನದಲ್ಲಿ ಮನೆ ಖರ್ಚು ತೂಗಿಸಲು ಹೆಣಗಾಡುವ ತಾಯಿ ಕಾಣುವುದಿಲ್ಲ. ಕುಡುಕ, ರೌಡಿ ಅಣ್ಣನ  ಜೇಬಿನಿಂದ ಎಗರಿಸಿದ ಹಣದಿಂದ ಬೀದಿ ಮಕ್ಕಳಿಗೆ ಐಸ್ ಕ್ರೀಮ್ ಕೊಡಿಸಿ ಆ ಅನ್ಯಾಯದ ಹಣಕ್ಕೆ ನ್ಯಾಯದ ಮಾರ್ಗ ತೋರಿಸಿದೆ ಎಂದುಕೊಳ್ಳುತ್ತಾಳೆ. ಪಬ್ ಪಾರ್ಟಿಗಳಿಗೆ ಹೋಗಿ ಬರುತ್ತಾಳೆ.

ಕೆಳವರ್ಗದ ಹುಡುಗಿಯಾದರೂ ತಾನು ಅಲ್ಲಿ ಸೇರಿದವಳು, ತಾನು ಪ್ರತಿನಿಧಿಸುವುದು ಕೆಳವರ್ಗವನ್ನು, ತನ್ನ ಬದುಕು ಕೆಳವರ್ಗದ ಬದುಕೇ ಎನ್ನುವುದನ್ನು ನಿರಾಕರಿಸುತ್ತಲೇ ಇರುವ ಗೀತಾ ಕೃಷ್ಣ ಹಾಗೂ ನರೇಂದ್ರ ಇಬ್ಬರೂ ಗೆಲ್ಲುವುದಕ್ಕೆಂದು ಮಾಡಿಕೊಂಡ ಪ್ರೀತಿ ಎಂಬ ಆಟದ ದಾಳವಾಗುತ್ತಾಳೆ. ಪಾಪ ಅವಳಿಗೆ ಅದರ ಅರಿವೂ ಇರುವುದಿಲ್ಲ. ಇಡೀ ಪ್ರಕ್ರಿಯೆಯಲ್ಲಿ ಆಕೆ ಕೃಷ್ಣ ಹಾಗೂ ನರೇಂದ್ರ ಎಂಬ ಇಬ್ಬರು ಹುಡುಗರನ್ನು ತನ್ನೆದುರು ಇರುವ ಎರಡು ಆಯ್ಕೆಗಳು ಎಂದೇ ನಂಬಿಕೊಂಡಿರುತ್ತಾಳೆ. ಒಂದು ಸಂದರ್ಭದಲ್ಲಿ ಆಕೆ ತನ್ನನ್ನು ಚುಡಾಯಿಸುತ್ತಿದ್ದ ಪೋಲಿ ಹುಡುಗರಿಗೆ ಕೇಳುತ್ತಾಳೆ, “ನೀವು ಶರ್ಟು ಖರೀದಿಸುವುದಕ್ಕೆ ಹೋದಾಗ, ಇದು ಚೆನ್ನಾಗಿದೆಯೋ ಅಥವಾ ಮತ್ತೊಂದು ಚೆನ್ನಾಗಿದೆಯೋ ಎಂದು ಅಳೆದು ತೂಗಿ ಆಯ್ಕೆ ಮಾಡುವುದಿಲ್ಲವೇ? ಹಾಗೆಯೇ ನನ್ನೆದುರು ಕೃಷ್ಣ ಹಾಗೂ ನರೇಂದ್ರ ಇದ್ದರು. ನಾನು ಆಗ ಅವನನ್ನು ಆಯ್ಕೆ ಮಾಡಿಕೊಂಡೆ.. ಅದು ತಪ್ಪಾ ಸಾರ್?”

ತಾನು ಅವರಿಬ್ಬರು ಆಡುತ್ತಿರುವ ಆಟದ ದಾಳವಾಗಿ ಅವರಿಬ್ಬರೂ ತನ್ನೆದುರು ಇರುವ ಆಯ್ಕೆ, ತನ್ನ ನಿರ್ಧಾರದಿಂದ ಅವರಿಬ್ಬರ ಗೆಲುವು ಸೋಲುಗಳು ನಿಷ್ಕರ್ಷೆಯಾಗುತ್ತವೆ ಎಂಬ ಭ್ರಮೆಗೆ ಬೀಳುತ್ತಾಳೆ ಗೀತಾ. ಆದರೆ ಯಾವುದೂ ಅವಳ ಕೈಲಿ ಇಲ್ಲ ಎನ್ನುವುದನ್ನು ಚಿತ್ರದ ಎರಡನೆಯ ಭಾಗ ನಿರ್ದಯವಾಗಿ ನಿರೂಪಿಸುತ್ತಾ ಹೋಗುತ್ತದೆ. ಆಕೆ ಆಯ್ದುಕೊಂಡು ಹೋದ ನರೇಂದ್ರ ಆಕ್ಸಿಡೆಂಟಿನಲ್ಲಿ ಸತ್ತು ಹೋಗುತ್ತಾನೆ. ತಾನು ತಿರಸ್ಕರಿಸಿದ ಆಯ್ಕೆಯಾದ ಕೃಷ್ಣ ಆಕೆ ಕೆನ್ನೆಗೆ ಬಾರಿಸಿ ಓಡಿಸಿದರೂ ಮತ್ತೆ ಮತ್ತೆ ಬಂದು ಅಂಟಿಕೊಳ್ಳುತ್ತಾನೆ. ಯಾವುದೂ ಆಕೆಯ ಕೈಲಿಲ್ಲ ಎನ್ನುವ ಸತ್ಯವನ್ನು ಚಿತ್ರ ಸ್ಪಷ್ಟವಾಗಿ ಹೇಳುತ್ತದೆ. ಗೀತಾ ತಾನು ಸ್ವತಂತ್ರ ಆಯ್ಕೆಯನ್ನು ಹೊಂದಿದ್ದೇಬೆ ಎನ್ನುವ ಭ್ರಮೆಯಿಂದ ಹೊರ ಬರುವುದಕ್ಕೆ ಇದ್ದದ್ದು ಎರಡೇ ದಾರಿ.

ಒಂದು, ಸತ್ತು ಹೋಗುವುದು. ಆ ಮಾರ್ಗವನ್ನು ತಿರಸ್ಕರಿಸಿ ಬದುಕುಳಿದರೆ ಮಾನಸಿಕ ಸ್ಥಿಮಿತವನ್ನು ಕಳೆದುಕೊಂಡು ಹುಚ್ಚಿಯಾಗುವುದು. ಅಂದರೆ ಗೀತಾ ತನಗಿಂತ ಮೇಲ್ವರ್ಗದ ಸಮಾಜದ ಕೈಲಿ ಆಟದ ದಾಳವಾಗಿದ್ದೇನೆ ಎಂದು ಅರಿಯುವುದಕ್ಕೆ ಸಾಧ್ಯವೇ ಇಲ್ಲ. ಒಂದು ವೇಳೆ ಆ ಅರಿವನ್ನು ಪಡೆದು ಅದರಿಂದ ಕಳಚಿಕೊಂಡು ತನ್ನತನವನ್ನು ಸ್ಥಾಪಿಸಿಕೊಳ್ಳಬೇಕೆಂದರೆ ಪ್ರಾಣ ಕಳೆದುಕೊಳ್ಳಬೇಕು, ಇಲ್ಲವೇ ಪ್ರಜ್ಞೆ ಕಳೆದುಕೊಳ್ಳಬೇಕು.

ಮನೋವೈದ್ಯನೊಂದಿಗೆ ಮಾತನಾಡಿ ಚಿಕಿತ್ಸೆ ಪಡೆಯಲು ನಿರಾಕರಿಸುವ, ಪ್ರೇಮದಾಸ ಕರೆದೊಯ್ಯುವ ದ್ವೀಪದಲ್ಲಿ ಪುಂಡರಿಗೆ ತನ್ನ ಮೈಯೊಪ್ಪಿಸಿಕೊಳ್ಳುವ ಗೀತಾ ಪ್ರಜ್ಞೆಯನ್ನು ಕಳೆದುಕೊಳ್ಳುವ ಪ್ರಯತ್ನವನ್ನೂ ಮಾಡುತ್ತಾಳೆ. ಆದರೆ ಕೃಷ್ಣ ಅವಳನ್ನು ಪ್ರಜ್ಞೆಗೆ ವಾಪಸ್ ಎಳೆದು ತರುತ್ತಲೇ ಇರುತ್ತಾನೆ. ಅನಂತರ ಆಕೆ ಪ್ರಾಣವನ್ನು ಕಳೆದುಕೊಳ್ಳುತ್ತಾಳೆ.

ಹಾಗಿದ್ದರೆ, ಹುಚ್ಚಿಯಾಗುವ ಇಲ್ಲವೇ ಸಾಯುವ ಮೂಲಕ ಗೀತಾ ತನ್ನನ್ನು ತಾನು ಕಂಡುಕೊಂಡಳು ಎನ್ನಬಹುದೆ? ತನ್ನನ್ನೇ ತಾನು ಕಳೆದುಕೊಂಡು ಯಾರದೂ ಆಟದ ದಾಳವಾಗುವುದರಿಂದ ಪಾರಾಗಿ ತನ್ನನ್ನು ತಾನು ಸ್ಥಾಪಿಸಿಕೊಂಡಳು ಎನ್ನಬಹುದೆ? ಒಬ್ಬರು ಗೆದ್ದು ಇನ್ನೊಬ್ಬರು ಸೋಲಬೇಕು ಎನ್ನುವ ನಿಯಮವಿರುವ ಆಟದಲ್ಲಿ ಇಬ್ಬರೂ ಗೆಲ್ಲುವಂತೆ ಒಳ ಒಪ್ಪಂದಗಳನ್ನು ಮಾಡಿಕೊಂಡರೆ ನಿಜಕ್ಕೂ ಸೋಲುವುದು ಯಾರು? ಕೃಷ್ಣ ಹಾಗೂ ನರೇಂದ್ರ ಬೆಟ್ ನಿಂದ, ಒಳ ಒಪ್ಪಂದದಿಂದ ಶುರು ಮಾಡಿದ ಗೀತಾಳ ಪ್ರೇಮ ಎನ್ನುವ ಆಟದಲ್ಲಿ ಅವರಿಬ್ಬರೂ ಗೆಲ್ಲುತ್ತಾರೆಂದರೆ ಸೋಲುವುದು ಗೀತಾಳೆ. ಗೀತಾ ಬದುಕಿದ್ದರೆ, ಪ್ರಜ್ಞೆ ಉಳಿಸಿಕೊಂಡು ಬಾಳಿದ್ದರೆ ಆಕೆ ಸೋಲುತ್ತಿದ್ದಳು ಕೃಷ್ಣ, ನರೇಂದ್ರ ಗೆಲ್ಲುತ್ತಿದ್ದರು. ಈಕೆ ಸೋತು, ದಾಳವಾಗಿಯೇ ಬಾಳಬೇಕಿತ್ತು.  ತನ್ನನ್ನು ತಾನು ಕೊಂದುಕೊಳ್ಳುವ ಮೂಲಕ ಆಕೆ ಕೃಷ್ಣ ನರೇಂದ್ರರನ್ನು ಸೋಲಿಸಿದಳು, ತಾನು ಗೆದ್ದಳು!

ಹೀಗೆ ತಾನು ಸೋತರೆ ಗೆದ್ದಂತೆ, ಗೆದ್ದರೆ  ಸತ್ತು ಸೋತಂತೆ ಎನ್ನುವ ವ್ಯಂಗ್ಯಮಯವಾದ ದ್ವಂದ್ವಕ್ಕೆ ಸಿಲುಕಿದ ಗೀತಾಳಿಗೆ,ಆ ಮೂಲಕ ಆಕೆ ಭಾಗವಾಗಿರುವ ಆದರೆ ಭಾಗವಾಗಿದ್ದೇನೆಂದು ಒಪ್ಪಿಕೊಳ್ಳಲು ನಿರಾಕರಿಸುವ ಕೆಳವರ್ಗಕ್ಕೆ ಮುಕ್ತಿ ಎಂದು? ಹಾಗೂ ಹೇಗೆ? ಎನ್ನುವ ಬಹು ಹರಿತವಾದ ಪ್ರಶ್ನೆಯನ್ನು ಒಂದು ಸಮಾಜವಾಗಿ ನಾವು ಕೇಳಿಕೊಳ್ಳುವುದಕ್ಕೆ ಕೃಷ್ಣನ ಲವ್ ಸ್ಟೋರಿ ಪ್ರೇರೇಪಿಸುತ್ತದೆ ಎನ್ನಬಹುದು.

***

ಕೆಳವರ್ಗದ ಭಾಗವಾಗಿ, ಆ ಬದುಕನ್ನು ಒಪ್ಪಿಕೊಂಡ- ಗೀತಾಳ ಜೊತೆ ಜೊತೆಗೇ ತೆರೆಯ ಮೇಲೆ ಕಾಣುವ ಆಕೆಯ ತಾಯಿ ಉಮಾಶ್ರೀ ಪಾತ್ರ ಕಂಡುಕೊಂಡ ಉತ್ತರದಿಂದೇನಾದರೂ ಗೀತಾಳಿಗೆ ಮುಕ್ತಿ ಸಾಧ್ಯವೇ?

ನರೇಂದ್ರನ ಹಿಂದೆ ಹೊರಟು ಕೆಳವರ್ಗದಿಂದ ಶ್ರೀಮಂತ ವರ್ಗಕ್ಕೆ ಮಗಳೊಬ್ಬಳೆ ಹಾರಿಕೊಂಡು ಬಿಡುವುದನ್ನು ಸಹಿಸದ ಉಮಾಶ್ರೀ ಕೃಷ್ಣ ಬೊಟಿಕ್ ಶಾಪ್ ಇಡುವುದು, ಕಾರು ಕೊಂಡುಕೊಳ್ಳುವುದು, ತನ್ನ ಬೇಜವಾಬ್ದಾರಿಯ ಮಗನು ಜವಾಬ್ದಾರಿ ಅರಿತು ದುಡಿಮೆಗೆ ತೊಡಗುವುದು, ಮಧ್ಯಮ ವರ್ಗದಿಂದ ಮೇಲ್ ಮಧ್ಯಮ ವರ್ಗಕ್ಕೆ ಏರುತ್ತಿರುವ ಕೃಷ್ಣನ ತಂದೆ ತಾಯಿಯರನ್ನು ನಂಟರನ್ನಾಗಿಸಿಕೊಂಡು ತಾನು ಮಧ್ಯಮ ವರ್ಗಕ್ಕೆ ಏರುವುದು – ಇವುಗಳಲ್ಲಿ ಕಂಡುಕೊಳ್ಳುವ ಉತ್ತರದಿಂದ ಗೀತಾ ಗೆಲ್ಲಬಹುದಿತ್ತೇ?

December 23, 2010

ಪಾಡ್ ಕಾಸ್ಟ್: ರಾಮ್ ಗೋಪಾಲ್ ವರ್ಮಾ ರಕ್ತಚರಿತಾ ಹಾಗೂ ಬಂಡಿಟ್ ಕ್ವೀನ್!

ನಾವು ಸಿನೆಮಾ ನಿರ್ಮಿಸುವುದರ ಜೊತೆಗೆ, ನಿರ್ಮಾಣದ ಪ್ರಕ್ರಿಯೆಯನ್ನು ಸಹ ಹಂತ ಹಂತವಾಗಿ ದಾಖಲಿಸುತ್ತಾ ಹೋಗುವ ನಿರ್ಧಾರವನ್ನು ಯೋಜನೆಗೆ ತೊಡಗುವ ಮೊದಲು ಮಾಡಿಕೊಂಡಿದ್ದೆವು. ಸಿನೆಮ ತನ್ನ ಕಥಾವಸ್ತು, ಶೈಲಿ ಮೊದಲಾದ ತಾಂತ್ರಿಕ ವಿವರಗಳ ಜೊತೆಗೆ ತಾನು ನಿರ್ಮಾಣಗೊಳ್ಳಲು ಆಶ್ರಯಿಸುವ ಆರ್ಥಿಕತೆ, ವೃತ್ತಿಪರತೆಯ ಮಾದರಿ ಇವೆಲ್ಲವೂ ಮುಖ್ಯವಾಗುತ್ತವೆ ಎನ್ನುವ ಅರಿವಿನಿಂದ ನಾವು ಚಿತ್ರಕತೆ ತಯಾರಾಗುವ ಮುಂಚಿನಿಂದಲೇ ನಮ್ಮ ಚಟುವಟಿಕೆಗಳನ್ನು ದಾಖಲಿಸುವ ಉದ್ದೇಶದಿಂದ ‘ಭೂತಗನ್ನಡಿ’ ಬ್ಲಾಗ್ ತೆರೆದದ್ದು.

 

ಈ ನಿಟ್ಟಿನಲ್ಲಿ ಈಗಾಗಲೇ ನಾವು ನಮ್ಮ ತಂಡದ ಸದಸ್ಯರ ಪರಿಚಯ, ನಾವು ನಡೆಸಿದ ಭೇಟಿಗಳ ಕುರಿತ ಮಾಹಿತಿ. ನಮ್ಮ ಕೆಲಸದ ದಿಕ್ಕು ದೆಸೆ ಬಗ್ಗೆ ಬರೆದಿದ್ದೇವೆ.

 

ಈ ಪೋಸ್ಟಿನಿಂದ ನಮ್ಮ ಚರ್ಚೆಯ ಆಡಿಯೋ ಕ್ಲಿಪ್ಪಿಂಗುಗಳನ್ನು ಪಾಡ್ ಕಾಸ್ಟ್ ಮಾಡುತ್ತಿದ್ದೇವೆ. ಪಾಡ್ ಕಾಸ್ಟ್ ಸರಣಿಯ ಮೊದಲ ಭಾಗ ಇಲ್ಲಿದೆ:

(ಮಾತುಕತೆಯಲ್ಲಿ ಭಾಗಿಯಾದವರು:

ಶೇಖರ್ ಪೂರ್ಣ

ಸುಪ್ರೀತ್.ಕೆ.ಎಸ್

ಕಿರಣ್.ಎಂ

ಧ್ವನಿ ಮುದ್ರಣ, ಸಂಸ್ಕರಣೆ: ಸುಪ್ರೀತ್.ಕೆ.ಎಸ್)

 

http://bootagannadi.blogspot.com/2010/12/blog-post_23.html

December 16, 2010

ಟಿವಿ ಎನ್ನುವುದೊಂದು ಸರ್ಕಸ್, ಆಫ್ ಮಾಡಿ ಈ ಕೂಡಲೇ..!

ದಿ ಟ್ವೆಲ್ವ್ ಆಂಗ್ರಿ ಮೆನ್ಖ್ಯಾತಿಯ ನಿರ್ದೇಶಕ ಸಿಡ್ನಿ ಲ್ಯುಮೆಟ್ ೧೯೭೬ರಲ್ಲಿ ನಿರ್ದೇಶಿಸಿದ ನೆಟ್ ವರ್ಕ್ನಾನು ಇತ್ತೀಚೆಗೆ ನೋಡಿದ ಸಿನೆಮ. ಎಪ್ಪತ್ತರ ದಶಕದ ಅಮೇರಿಕಾದ ನೆಟ್ ವರ್ಕ್ ಟಿಲಿವಿಷನ್ ಸಂಸ್ಕೃತಿಯ ಅಮಾನವೀಯ ಮುಖವನ್ನು ತೆರೆದಿಟ್ಟ ಸಿನೆಮ ಇದು. ಈ ಚಿತ್ರದಲ್ಲಿ ಅರೆಹುಚ್ಚ ಪತ್ರಕರ್ತನಾಗಿ ನಟಿಸಿರುವ ಪೀಟರ್ ಫಿಂಚ್ ತನ್ನ ಅದ್ಭುತ ನಟನೆಗಾಗಿ ಆಸ್ಕರ್ ಪ್ರಶಸ್ತಿಗೆ ಆಯ್ಕೆಯಾದ. ದುರದೃಷ್ಟವಶಾತ್ ಪ್ರಶಸ್ತಿ ಸ್ವೀಕರಿಸುವ ಮೊದಲೇ ತೀರಿಹೋದ. ಆಸ್ಕರ್ ಇತಿಹಾಸದಲ್ಲೇ ಮೊಟ್ಟ ಮೊದಲಬಾರಿಗೆ ಮರಣೋತ್ತರ ಆಸ್ಕರ್ ಪ್ರಶಸ್ತಿ ಸಂದಾಯವಾದ ಘಟನೆಯಿದು ( ನಂತರ ‘ದಿ ಡಾರ್ಕ್ ನೈಟ್’ ಚಿತ್ರದ ಅಭಿನಯಕ್ಕಾಗಿ ಹೀತ್ ಲೆಜರ್ ಗೆ ಮರಣೋತ್ತರ ಆಸ್ಕರ್ ಪ್ರಶಸ್ತಿ ಕೊಡಲಾಯ್ತು).

 

ಟಿವಿ ಎನ್ನುವುದು ಹೇಗೆ ಕೇವಲ ಮನರಂಜನೆಯ ಮಾಧ್ಯಮವಾಗಿ ನಮ್ಮ ಮನೆಗಳಲ್ಲಿ, ಬದುಕುಗಳಲ್ಲಿ ಪ್ರವೇಶ ಪಡೆದು ನಮ್ಮನ್ನಾಳುವ ಪಟ್ಟಭದ್ರ ಹಿತಾಸಕ್ತಿಗಳ ಪಾಲಿನ ಅತಿ ದೊಡ್ಡ ಆಯುಧವಾಗುತ್ತದೆ ಎನ್ನುವುದನ್ನು ತುಂಬ ಸಟೈರಿಕಲ್ ಆಗಿ ಹೇಳಿರುವ ಚಿತ್ರ ‘ನೆಟ್ವರ್ಕ್’ ನಾಲ್ಕು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿರುವ ನಟರ ಮನೋಜ್ಞ ಅಭಿನಯಕ್ಕಾಗಿಯಾದರೂ ಸಿನೆಮಾವನ್ನು ನೋಡಲೇ ಬೇಕು. ತನ್ನ ಹಿಂದಿನ ಎರಡು ಚಿತ್ರಕತೆಗಾಗಿ ಆಸ್ಕರ್ ಪಡೆದಿದ್ದ ನಾಟಕಕಾರ ಪ್ಯಾಡಿ ಚಾಯೆಫ್ಸ್ಕಿ ಬರೆದಿರುವ ಈ ಚಿತ್ರಕತೆಗೂ ಆಸ್ಕರ್ ಲಭಿಸಿತು. ಸಿಡ್ನಿಯವರಂತಹ ಸೂಕ್ಷ್ಮ ಮನಸ್ಸಿನ ಚಿತ್ರ ನಿರ್ದೇಶಕರ ಕೈಲಿ ಈ ಚಿತ್ರಕತೆ ಸಶಕ್ತವಾಗಿ ಪರದೆಯ ಮೇಲೆ ಮೂಡಿ ಬಂದಿತು. ತಾನು ಪ್ರತಿನಿಧಿಸಿದ ವರ್ಷದಲ್ಲಿ ಹತ್ತು ಆಸ್ಕರ್ ಗಳಿಗೆ ನಾಮನಿರ್ದೇಶನವಾಗಿ, ನಾಲ್ಕು ಆಸ್ಕರ್ ಗಳನ್ನು ಬಾಚಿದ ಹೆಮ್ಮೆ ಈ ಚಿತ್ರದ್ದು. 

 

ಈ ಚಿತ್ರದ ಕುರಿತು ವಿವರವಾದ ವಿಮರ್ಶೆಯೊಂದನ್ನು ಬರೆಯುವ ಮನಸ್ಸಿದೆಯಾದರೂ ಸಮಯಾಭಾವದಿಂದ ಚಿತ್ರದ ಬಗೆಗೆ ಏನೂ ಬರೆಯಲು ಸಾಧ್ಯವಾಗದಿರಬಹುದೆಂಬ ಆತಂಕದಿಂದ ಈ ಸಣ್ಣ ಟಿಪ್ಪಣಿ ಪ್ರಕಟಿಸುತ್ತಿರುವೆ.

 

ಹುಚ್ಚು ಪ್ರವಾದಿಯ ಪಾತ್ರವನ್ನು ಮಾಡರುವ ಪೀಟರ್ ಫಿಂಚ್ ತುಂಬಾ ಐಕಾನಿಕ್ ಎನ್ನಬಹುದಾದ ಈ ಒಂದು ದೃಶ್ಯದಲ್ಲಿ ಆಡುವ ಮಾತುಗಳು ಅದ್ಭುತವಾಗಿವೆ. ನಾಟಕಕಾರ ಪ್ಯಾಡಿ ಒಂದೊಂದು ಸಾಲನ್ನೂ ಅತಿ ಶಕ್ತಿಯುತವಾಗಿ ಕಟ್ಟಿಕೊಟ್ಟಿರುವುದು ಮೇಲ್ನೋಟಕ್ಕೆ ನಮ್ಮ ಗಮನಕ್ಕೆ ಬರುವುದು.

 

You people and sixty-two million other Ameicans are listening to me right now. Because less than three percent of you people read books. Because less than fifteen percent of you read newspapers. Because the only truth you know is what you get over this tube. Right now, there is a whole, an entire generation that never knew anything that didn’t come out of this tube. This tube is the gospel, the ultimate revelation. This tube can make or break Presidents, Popes, Prime Ministers. This tube is the most awesome, god-damned force in the whole godless world. And woe is us if it ever falls into the hands of the wrong people and that’s why woe is us that Edward George Ruddy died. Because this company is now in the hands of CCA, the Communication Corporation of America. There’s a new chairman of the board, a man called Frank Hackett sitting in Mr. Ruddy’s office on the 20th floor. And when the twelfth largest company in the world controls the most awesome, god-damned propaganda force in the whole godless world, who knows what s–t will be peddled for truth on this network. So, you listen to me! Listen to me! Television is not the truth. Television is a god-damned amusement park. Television is a circus, a carnival, a traveling troupe of acrobats, story tellers, dancers, singers, jugglers, sideshow freaks, lion tamers and football players. We’re in the boredom-killing business. So if you want the truth, go to your God, go to your gurus, go to yourselves because that’s the only place you’re ever gonna find any real truth. But man, you’re never gonna get any truth from us. We’ll tell you anything you want to hear. We lie like hell! We’ll tell you that Kojack always gets the killer, and nobody ever gets cancer in Archie Bunker’s house. And no matter how much trouble the hero is in, don’t worry. Just look at your watch – at the end of the hour, he’s gonna win. We’ll tell you any s–t you want to hear. We deal in illusions, man. None of it is true! But you people sit there day after day, night after night, all ages, colors, creeds – we’re all you know. You’re beginning to believe the illusions we’re spinning here. You’re beginning to think that the tube is reality and that your own lives are unreal. You do whatever the tube tells you. You dress like the tube, you eat like the tube, you raise your children like the tube. You even think like the tube. This is mass madness. You maniacs. In God’s name, you people are the real thing. We are the illusion. So turn off your television sets. Turn them off now. Turn them off right now. Turn them off and leave them off. Turn them off right in the middle of this sentence I am speaking to you now. Turn them off!

December 15, 2010

ಒಂದು ಸಿನೆಮ ಕತೆ

 

ಸಣ್ಣದೊಂದು ಹವ್ಯಾಸಿ ತಂಡವೊಂದರಲ್ಲಿ ಭಾಗಿಯಾಗಿ ಸಿನೆಮ ನಿರ್ಮಾಣದ ಕೆಲಸಕ್ಕೆ ತೊಡಗಿಕೊಂಡು ಈ ಡಿಸೆಂಬರ್ ಕಳೆಯುವುದರಲ್ಲಿ ಆರು ತಿಂಗಳು ಪೂರೈಸುತ್ತಿವೆ. ಡೆಕ್ಕನ್ ಹೆರಾಲ್ಡ್ ನಲ್ಲಿ ಸಿನೆಮ ವಿಮರ್ಶಕರಾಗಿ ಖ್ಯಾತರಾದ, ಪ್ರಸ್ತುತ ಸಂವಾದ ಡಾಟ್ ಕಾಮ್ ನ ಮೂಲಕ ಕನ್ನಡದ ಜನಪ್ರಿಯ ಸಿನೆಮಗಳ ಕುರಿತು ಅಕಾಡೆಮಿಕ್ ನೆಲೆಯಲ್ಲಿ ಚರ್ಚೆಗಳನ್ನು ಹುಟ್ಟುಹಾಕುತ್ತಿರುವ ಶೇಖರ್ ಪೂರ್ಣರ ಮಾರ್ಗದರ್ಶನದಲ್ಲಿ ನಾವು ಕೆಲಸ ಮಾಡಲು ಶುರು ಮಾಡಿದೆವು.

 

ಮೊದಲ ಹಂತವಾಗಿ ನಾವು ತೀರ್ಥಹಳ್ಳಿ ಸಮೀಪದ ಕೆಲವು ಸ್ಥಳಗಳನ್ನು ಸಂದರ್ಶಿಸಿ ಅಲ್ಲಿನ ಜನರೊಂದಿಗೆ ಮಾತುಕತೆ ನಡೆಸಿ ಕಥಾವಸ್ತುಗಳಿಗಾಗಿ ಕಚ್ಚಾ ಮಾಹಿತಿಯನ್ನು ಕಲೆ ಹಾಕಿದೆವು.

 

ಅನಂತರ ಹಲವು ಕತಾ ಹಂದರಗಳ ಚರ್ಚೆಯನ್ನು ನಡೆಸಿ ಮೂರು ನಾಲ್ಕು ಮಂದಿ ನಮ್ಮ ಕತೆಗಳನ್ನು ಚಿತ್ರಕತೆಯಾಗಿ ಹಿಗ್ಗಿಸುವ ಕಾರ್ಯದಲ್ಲಿ ತೊಡಗಿದೆವು. ನಾನು ಆಗ ಬರೆದ ಚಿತ್ರಕತೆಯ ಡ್ರಾಫ್ಟ್ ಇದು. ಚಿತ್ರಕತೆಯನ್ನು ಬರೆದ ನಂತರದ ಚರ್ಚೆಗಳಲ್ಲಿ ನನಗೆ ಬರವಣಿಗೆಗೂ ಚಲನಚಿತ್ರಕ್ಕೂ ಇರುವ ಅಗಾಧ ವ್ಯತ್ಯಾಸದ ಅರಿವಾಗತೊಡಗಿತು. ಹತ್ತು ಇಪ್ಪತ್ತು ಪುಟಗಳ ನಮ್ಮ ಬರವಣಿಗೆ ಕೆಮರಾ ಎದುರು ಹತ್ತು ನಿಮಿಷದಲ್ಲಿ ಮೈಚೆಲ್ಲಿ ಕೂತುಬಿಡುತ್ತದೆ.

 

ಅನೇಕ ದಿನಗಳ ಚರ್ಚೆಗಳ ತರುವಾಯ ಚಿತ್ರಕತೆಯನ್ನು ಕೈಬಿಟ್ಟು ಹೊಸತೊಂದು ಕಥಾವಸ್ತುವನ್ನು ಎತ್ತಿಕೊಂಡು ಕೆಲಸ ಮಾಡುತ್ತಿದ್ದೇವೆ. ಸುಮ್ಮನೆ ಫೈಲಿನಲ್ಲಿ ಉಳಿದಿದ್ದ ಚಿತ್ರಕತೆಯನ್ನು ಪ್ರಕಟಿಸೋಣ ಎನ್ನುವ ಇರಾದೆಯಿಂದ ಹೊರತೆಗೆದಿದ್ದಾಯಿತು. ಚಿತ್ರಕ್ಕಾಗಿ ಬರೆದಿರುವ ಪ್ರತಿ ಸಾಹಿತ್ಯವಾಗಿ ಓದುವುದಕ್ಕೆ ತೀರಾ ತೊಡಕು ಉಂಟು ಮಾಡುತ್ತದೆ. ತೀರಾ ಬೇಸರವೂ ಆಗಬಹುದು. ಆದರೂ ದಾಖಲಿಸಿಡುವ ಉದ್ದೇಶದಿಂದ ಇದನ್ನು ಪ್ರಕಟಿಸುತ್ತಿದ್ದೇನೆ.

 

ದೃಶ್ಯ ೧:

 

ಹಗಲು

ಕಾಡು

ಪೊಲೀಸ್ ಮಾಹಿತಿದಾರ

ಗನ್ ಫೈರ್ ಆದ ಸದ್ದು ಕೇಳುತ್ತೆ ಮಾಹಿತಿದಾರ ಶವವನ್ನು ಕಂಡು ಎಸ್ ಐಗೆ ಫೋನ್ ಮಾಡಿ ಮಾಹಿತಿ ತಿಳಿಸ್ತಾನೆ

 

ದೃಶ್ಯ :

ಹಗಲು

ಮನೆಯೊಳಗೆ

ಎಸ್ ಐ, ಹೆಂಡತಿ

ಮೇಲಧಿಕಾರಿಗಳಿಗೆ ಫೋನ್ ಮಾಡಿ ಸಮಾಲೋಚನೆ ನಡೆಸುತ್ತಾನೆ, ನಕ್ಸಲ್ ಸಾವನ್ನು ಎನ್ ಕೌಂಟರ್ ಎಂದು ಬಿಂಬಿಸುವುದಕ್ಕೆ instructions ಸಿಕ್ಕುತ್ತವೆ

 

ದೃಶ್ಯ

ಹಗಲು

ಪೊಲೀಸ್ ಸ್ಟೇಷನ್

ಎಸ್ ಐ

ಪೇದೆಗಳು

ಅದಾಗಲೇ ಸತ್ತಿರುವ ನಕ್ಸಲ್ ನಾಯಕಿ ಕಾಡಿನಲ್ಲಿ ಓಡಾಡಿಕೊಂಡಿರುವ ಮಾಹಿತಿ ಸಿಕ್ಕಂತೆ ನಟಿಸಿ ಶೂಟರ್ ಗಳನ್ನ ಹೊರಡಿಸಿಕೊಂಡು ಹೋಗ್ತಾನೆ

 

ದೃಶ್ಯ

ಹಗಲು

ಕಾಡು

ಎಸ್ ಐ, ಶೂಟರ್, ಮಾಹಿತಿ ದಾರ

ಗುಂಡಿನ ಚಕಮಕಿಯಾದ ಸದ್ದು ಎನ್ ಕೌಂಟರ್ ನಡೆದಂತೆ ಸಾಕ್ಷ್ಯಗಳ ಸ್ಥಾಪನೆ ನಡೆಯುತ್ತೆ

 

ದೃಶ್ಯ

ಹಗಲು

ಪೊಲೀಸ್ ಸ್ಟೇಷನ್ ಆವರಣ

ಮಾಧ್ಯಮದವರು

ಎನ್ ಕೌಂಟರ್ ಹೇಗಾಯಿತೆಂಬುದಕ್ಕೆ ಮಾಧ್ಯಮದಲ್ಲಿ ಹೇಳಿಕೆಯನ್ನು ನೀಡುತ್ತಾನೆಕುಖ್ಯಾತ ನಕ್ಸಲ್ ನಾಯಕಿಯ ಎನ್ ಕೌಂಟರ್ ಎಂದು ಟಿವಿ ಚಾನೆಲ್ ಗಳು ವರದಿ ಮಾಡುತ್ತವೆ

 

ದೃಶ್ಯ

ಹಗಲು

ಮನೆಯೊಳಗೆ

ಜರ್ನಲಿಸ್ಟ್

ಟಿವಿಯಲ್ಲಿ ಬಿತ್ತರವಾದ ವರದಿಯಲ್ಲಿ ಶುಭಾ ಎನ್ ಕೌಂಟರ್, ಹಿನ್ನೆಲ ಹಾಗೂ ರಾಜಕೀಯ ವಿದ್ಯಮಾನಗಳನ್ನು ಗಮನಿಸ್ತಾಳೆಹೆಚ್ಚಿನದನ್ನ ತಿಳಿಯೋದಕ್ಕೆ ನಿಶ್ಚಿತಾರ್ಥವಾದ ಲೆಕ್ಚರರ್ ಗೆ ಫೋನ್ ಮಾಡ್ತಾಳೆಪೊಲೀಸರು ಕೊಲ್ಡ್ ಬ್ಲಡೆಡ್ ಆಗಿ ಕೊಲೆ ಮಾಡಿದ್ದಾರೆ ಎನ್ನುವ ಮಾಹಿತಿ ಸಿಕ್ಕುತ್ತೆವರದಿಗಾಗಿ ತಾನು ಭೇಟಿ ನೀಡಬಹುದು ಎನ್ನುತ್ತಾಳೆ

 

ದೃಶ್ಯ ೭

 

ಹಗಲು

ಆಫೀಸ್ ಕೊಠಡಿ

ಜರ್ನಲಿಸ್ಟ್, ಬಾಸ್

ಶುಭಾ ಸ್ಟೋರಿಯಲ್ಲಿರುವ ಮಾನವೀಯ ಅಂಶಗಳನ್ನು ಎಕ್ಸ್ ಪ್ಲಾಯ್ಟ್ ಮಾಡುವುದು ಹೇಗೆಂದು ಬಾಸ್ ವಿವರಿಸುತ್ತಾನೆಹಿಂದಿನ ಓಡಾಟಗಳಲ್ಲಿ ಲೆಕ್ಚರ್ ಹೇಳಿದ ಕತೆಗಳಿಂದ ಶುಭಾ ಇಂಟರೆಸ್ಟಿಂಗ್ ಪಾತ್ರವಾಗಿ ಜರ್ನಲಿಸ್ಟಿಗೆ ಕಾಣುತ್ತಾಳೆ

 

ದೃಶ್ಯ

ರಾತ್ರಿ

ಪೊಲೀಸ್ ಸ್ಟೇಷನ್

ಜರ್ನಲಿಸ್ಟ್, ಎಸ್ ಐ, ಕೆಮರಾಮನ್

ತನ್ನ ಭೇಟಿ ಉದ್ದೇಶ ತಿಳಿಸಿ ವರದಿಗಾರಿಕೆಗಾಗಿ ಎಲ್ಲೆಲ್ಲಿ ತಾನು ಹೋಗುತ್ತಿದ್ದೇನೆಂದು ಪೊಲೀಸರಿಗೆ ತಿಳಿಸುತ್ತಾಳೆಲೆಕ್ಚರ್ ಜೊತೆ ನಿಶ್ಚಿತಾರ್ಥವಾಗಿರುವ ರಿಪೋರ್ಟರ್ ಕುರಿತು ಎಸ್ ಐ ಅಸಹನೆ ವ್ಯಕ್ತ ಪಡಿಸುತ್ತಾನೆ

 

ದೃಶ್ಯ

ರಾತ್ರಿ

ಮನೆಯ ಆವರಣ

ಜರ್ನಲಿಸ್ಟ್, ಲೆಕ್ಚರರ್

ವಯಕ್ತಿಕ ವಿಚಾರಗಳನ್ನು ಮಾತಾಡಿಕೊಳ್ಳುತ್ತಾರೆಶುಭಾಳ ಪ್ರಸ್ತಾಪದಿಂದ ಸಣ್ಣಗೆ ಚರ್ಚೆ ಶುರುವಾಗುತ್ತೆಲೆಕ್ಚರ್ ಮಾತುಗಳಿಂದ ಪ್ರಭಾವಿತಳಾದ ಜರ್ನಲಿಸ್ಟ್ ತನ್ನ ವರದಿಯ ರೂಪು ರೇಖೆ ಹೇಗಿರಬೇಕೆಂದು ನಿರ್ಧರಿಸುತ್ತಾಳೆ

 

ದೃಶ್ಯ ೧೦

ಹಗಲು

ಮನೆಯ ಆವರಣ

ಜರ್ನಲಿಸ್ಟ್, ಕೆಮರಾಮನ್, ಶುಭಾಳ ತಂದೆ

ಮಗಳ ಸಾವಿನ ಬಗ್ಗೆ ತಂದೆ ಏನನ್ನುತ್ತಾನೆ ಎಂದು ವರದಿ ಮಾಡುತ್ತಾಳೆ

 

ದೃಶ್ಯ ೧೧

ಹಗಲು

ಕಾಲೇಜು ಆವರಣ

ಲೆಕ್ಚರ್, ಮಾನವ ಹಕ್ಕುಗಳ ಹೋರಾಟಗಾರರು

ಶುಭಾ ಹತ್ಯೆಯನ್ನು ಖಂಡಿಸಿ ಪ್ರತಿಭಟನೆ ನಡೆಯುತ್ತಿರುತ್ತೆಅಲ್ಲಿನ ವರದಿಲೆಕ್ಚರರ್ ಶುಭಾ ಬಗ್ಗೆ ಮಾತನಾಡುತ್ತಾನೆ ಪೋಸ್ಟ್ ಮಾರ್ಟಂ ಬೆಂಗಳೂರಲ್ಲಿ ಆಗಬೇಕೆಂದು ಆಗ್ರಹಿಸುತ್ತಾರೆ

 

ದೃಶ್ಯ ೧೨

ಹಗಲು

ಹೊರಗೆ

ಜರ್ನಲಿಸ್ಟ್, ಲೆಕ್ಚರ್

ಮದುವೆಯಾಗಲಿರುವ ಜೋಡಿ ಪಿಕ್ನಿಕ್ ಎಂದು ಒಂದು ಜಾಗಕ್ಕೆ ಹೋಗಿರ್ತಾರೆಕಾಡುಗಳಲ್ಲಿ ನಡೆದಾಡುತ್ತ ಲೆಕ್ಚರ್ ನಕ್ಸಲ್ ಬದುಕು ಹೇಗಿರುತ್ತದೆಂಬುದನ್ನು ವಿವರಿಸ್ತಾನೆ

 

ದೃಶ್ಯ ೧೩

ಹಗಲು

ಮನೆಯೊಳಗೆ

ಜರ್ನಲಿಸ್ಟ್,ಲೆಕ್ಚರ್,ಲೆಕ್ಚರ್ ತಂದೆ

ವಾರ ಕಳೆದ ನಂತರ ಅರ್ಚಕನ ಕುಟುಂಬದಲ್ಲಿ ಕೋಲ ನಡೆಸಲು ತೀರ್ಮಾನಿಸಿರುವ ವಿಷಯ ಲೆಕ್ಚರ್ ತಂದೆ ತಿಳಿಸ್ತಾನೆ. ಅಮೇರಿಕಾದಲ್ಲಿದ್ದ ಅರ್ಚಕನ ಮಗಳು ಹಿಂದಿನ ರಾತ್ರಿ ಬಂದಿರುವುದಾಗಿ ತಿಳಿಯುತ್ತೆ ಕೋಲದ ಉದ್ದೇಶದ ಚರ್ಚೆಯಾಗುತ್ತೆನಕ್ಸಲ್ ನಾಯಕಿಯ ಮೋಹಕ್ಕೊಳಗಾಗಿ ಕಾಡು ಸೇರಿದ್ದ ಮಗನಿಗೆ ಆಕೆಯ ಮೋಹ ಬಿಟ್ಟರೆ ಕೋಲ ಎನ್ನುವ ಹರಕೆಯಿದ್ದಿರಬಹುದು ಎನ್ನುವ ಮಾತು ಹಳ್ಳಿಯಲ್ಲಿ ಓಡಾಡುತ್ತಿದೆ ಎನ್ನುವುದು ತಿಳಿಯುತ್ತೆ

 

ದೃಶ್ಯ ೧೪

ಹಗಲು

ಮನೆ ಹೊರಗೆ

ಜರ್ನಲಿ, ಲೆಕ್ಚರ್

ಕೋಲವನ್ನು ನೋಡಬೇಕೆಂದುಚಿತ್ರೀಕರಿಸಿಕೊಳ್ಳಬೇಕೆಂದು ಕೆಮರಾಮನ್ ಜೊತೆ ವಾಣಿ (ಜರ್ನಲಿಸ್ಟ್) ಮಾತನಾಡಿಕೊಂಡುಕೋಲದ ಬಗ್ಗೆ ಮಾತನಾಡುತ್ತಾ ಆತ ಕೋಲ್ಡ್ ರೀಡಿಂಗ್ ಇರಬಹುದು ಅನ್ನುವನು ವಾಣಿ ನಮ್ಮದಷ್ಟಕ್ಕೆ ಸೀಮಿತವಲ್ಲ ಎಂದು ವಿದೇಶದಲ್ಲಿ ಜನಪ್ರಿಯವಾದ ಮೀಡಿಯಮ್ ಟಾಕ್ ಬಗ್ಗೆ ಹೇಳುವಳು

 

ದೃಶ್ಯ ೧೬

ಹಗಲು

ಮನೆಯ ಹೊರಗೆ

ವಾಣಿ, ಆನಂದ್, ಕೆಮರಾ ಮನ್

ಆನಂದನ ಸ್ಟೂಡೆಂಟ್ ಆಗಿದ್ದ ಶುಭಾನಕ್ಸಲ್ ಆದ ಮೇಲೆಆಕೆಯ ಜ್ಯೂನಿಯರ್ ಹಾಗೂ ಅಭಿಮಾನಿ ಜಗದೀಶ್ ಅಬ್ಸ್ಕಾಂಡ್ ಆದ ಅವರಿಬ್ಬರೂ ಮದುವೆಯಾಗಿದ್ದಿರಬಹುದು ಎಂದು ಪೊಲೀಸರು ಹೇಳಿದ್ದುಒಳ್ಳೇ ಡೈಮೆನ್ಷನ್ ಸಿಕ್ಕಬಹುದು ಅಂತ ಆಗ ಅವರಿಬ್ಬರು ಗಂಡ ಹೆಂಡತಿಯೇ ಆಗಿರಬೇಕೆಂಬ ಕಂಡೀಷನ್ ಏನಕ್ಕೆ?

 

ದೃಶ್ಯ ೧೫

ಹಗಲು

ಮನೆಯೊಳಗೆ

ಅರ್ಚಕ, ಮಗಳು,ಮಗ,ಅಜ್ಜಿ

ಪ್ರಯಾಣದ ಬಗ್ಗೆ ಮಗಳ ಜೊತೆ ಮಾತುಕೋಲದ ವ್ಯವಸ್ಥೆ ಬಗ್ಗೆ ಮಗನೊಂದಿಗೆ ಚರ್ಚೆಪೀಡೆ ತೊಲಗಿತೆಂಬ ಅಣ್ಣ ಮನೆಗೆ ವಾಪಸ್ಸಾಗಬಹುದು ಎನ್ನುವ ಉತ್ಸಾಹ ಮಗಳದುಅಜ್ಜಿ ಆತ ಓದಿ ಹಾಳಾಗಿದ್ದು ಎನ್ನುವಳು ಕೋಲ ನಡೆಸಲು ಅವರಿಗೆ ನಿಜವಾದ ಕಾರಣ ಸ್ಪಷ್ಟವಾಗುತ್ತೆ

 

ದೃಶ್ಯ ೧೬

ಸಂಜೆ

ಮನೆಯ ಹಿತ್ತಲು, ಕೋಲದ ಪಾತ್ರಿ, ಊರಿನ ಜನ

ಕೋಲದ ತಯಾರಿಪಾಡ್ದನಉನ್ಮಾದಕ್ಕಾಗಿ ಕುಣಿತ ನಿಮ್ಮ ಮಗನು ಮೋಹದಿಂದ ಹೊರ ಬಂದಿದಾನೆ ಎನ್ನುವ ಪಾತ್ರಿನಾನಾ ಹೇಳಿಕೆಗಳನ್ನು ನೀಡಿದ ನಂತರ ಲೆಕ್ಚರ್ ಬಳಿ ಬಂದು ಬ್ರಾಹ್ಮಣ ಶಿಶುವನ್ನು ಕೊಂದ ದೋಷವಿರುವುದಾಗಿ ಹೇಳಿ ಪರಿಹಾರ

 

ದೃಶ್ಯ ೧೭

ರಾತ್ರಿ

ಮನೆಯೊಳಗೆ

ವಾಣಿ,ಆನಂದ್ (ಲೆಕ್ಚರ್)

ಕೋಲದಲ್ಲಿ ತಿಳಿದ ವಿಷಯದ ಬಗ್ಗೆ ವಾಣಿ ಪ್ರಶ್ನಿಸಿ ಜಗಳವೆಬ್ಬಿಸುತ್ತಾಳೆಲೆಕ್ಚರ್ ನಿಗೆ ಅಕ್ರಮ ಸಂಬಂಧವಿರಬಹುದು ತನಗೆ ಮೋಸ ಮಾಡಿದ್ದಾನೆಂದು ಆಕೆಯಲ್ಲಿ ಸಂಶಯ ಮೂಡುತ್ತೆ

 

ದೃಶ್ಯ ೧೮

ಗಲು

ಮನೆಯೊಳಗೆ

ವಾಣಿ,

ಲ್ಯಾಪ್ ಟಾಪಿನಲ್ಲಿ ಮೇಲ್ ಚೆಕ್ ಮಾಡುತ್ತಿರುತ್ತಾಳೆ ನಕ್ಸಲ್ ಸಂಘಟನೆಯಿಂದ ಇ ಮೇಲ್ ಬಂದಿರುತ್ತೆಅದರಲ್ಲಿ ಶುಭಾಳನ್ನ ಹುತಾತ್ಮ ನಾಯಕಿಯಾಗಿ ಪೊಲೀಸರ ದೌರ್ಜನ್ಯಕ್ಕೆ ಒಳಗಾಗಿದೈಹಿಕವಾಗಿ ಬಳಸಲ್ಪಟ್ಟುಬರ್ಬರವಾಗಿ ಕೊಲೆಯಾಗಿರುವಳು ಎನ್ನುವುದಾಗಿ ವಿವರಿಸಿರುತ್ತಾರೆಬೆಂಗಳೂರಿನಲ್ಲಿ ಅಟೋಪ್ಸಿಯಾದರೆ ಸತ್ಯ ಬಯಲಾಗುತ್ತೆ

 

ದೃಶ್ಯ ೧೯

ಹಗಲು

ದೇವಸ್ಥಾನ

ವಾಣಿ,ಅರ್ಚಕ,ಅರ್ಚಕನ ಮಗಳು

 

ತಮ್ಮ ಮಗನಿಗೂ ಶುಭಾಳಿಗೂ ಇದ್ದ ಸಂಬಂಧದ ಬಗ್ಗೆ ಮಾತು ಕತೆಯಾಗುತ್ತೆ. ಸೌಂದರ್ಯವತಿಯಾಗಿದ್ದ ಶುಭಾ ಸಾಕಷ್ಟು ಮಂದಿಯನ್ನು ಮರಳು ಮಾಡಿದ್ದಳು. ಆಕೆಯ ಶೀಲದ ಬಗ್ಗೆ ಅರ್ಚಕನ ಮಗಳು ಸಂಶಯ ವ್ಯಕ್ತ ಪಡಿಸ್ತಾಳೆ. ಕಾಲೇಜು ದಿನಗಳಲ್ಲೂ ಹೋರಾಟ ಅಂತ ಹಳ್ಳಿಗಳಲ್ಲಿ ತಿರುಗುತ್ತಿದ್ದಳು. ಎಲ್ಲೆಲ್ಲೋ ಮಲಗುತ್ತಿದ್ದಳು. ಲೆಕ್ಚರ್ ಆನಂದನಿಗೂ ಮೋಡಿ ಹಾಕಿದ್ದಳು. ಎನ್ನುವಳು

 

ದೃಶ್ಯ ೨೦

ರಾತ್ರಿ

ಲೆಕ್ಚರ್ ಕಾಲೇಜು ರೂಮಿನೊಳಗೆ

ವಾಣಿ,ಆನಂದ್,ಕೆಮರಾ ಮನ್

 

ನಕ್ಸಲ್ ಜಗದೀಶ್ ಹಾಗೂ ಶುಭಾ ಸಂಬಂಧ ಮೊದಲಾದವುಗಳ ಕುರಿತು ಒಂದು ಬೈಟ್ ಪಡೆಯುವುದಕ್ಕೆ ಆತನ ಕೋಣೆಗೆ ಬರ್ತಾಳೆ. ಆತನ ಕಸದ ಬುಟ್ಟಿಯಲ್ಲಿ ಕಾಗದ ಕಾಣುತ್ತೆ. ಆಜಾದ್ ಎಂಬ ಹೆಸರಿರುವ ಪತ್ರ. ಆಕೆಯ ಸಾವಿಗೆ ನೀನೇ ಕಾರಣ ಎಂದು ಇರುತ್ತೆ. ಬೈಟ್ ಆದ ನಂತರ ಕ್ಯಾಮರಾ ಮನ್ ಹೊರಟು ಹೋಗ್ತಾನೆ

 

ದೃಶ್ಯ ೨೧

ರಾತ್ರಿ

ಮನೆಯೊಳಗೆ

ವಾಣಿ

ಮೆಸೇಜ್ ಬರುತ್ತೆ ಕೆಮರಾಮನ್ ನಿಂದ. ಟಿವಿ ಹಾಕುತ್ತಾಳೆ. ಪ್ರತಿಸ್ಪರ್ಧಿ ಟಿವಿ ಚಾನೆಲ್ಲಿನಲ್ಲಿ ವರದಿ ಪ್ರಕಟವಾಗ್ತಿರುತ್ತೆ. ಶುಭಾ ಸತ್ತಾಗ ಪ್ರಗ್ನೆಂಟ್ ಆಗಿದ್ದಳು ಎಂದು. ಚರ್ಚೆ ನಡೆಯುತ್ತೆ, ನಕ್ಸಲರಲ್ಲಿ ಯಾರಾದರೂ ಅಪ್ಪ ಆಗಿರಬಹುದು ಎಂದು. ಜಗದೀಶ ಆಕೆ ಮದುವೆಯಾಗಿದ್ದರು ಎನ್ನುವ ಅಂಶವೂ ಚರ್ಚಿತವಾಗುತ್ತೆ,

ಬಾಸ್ ನಿಂದ ಫೋನ್ಜಗದೀಶ್ ಪ್ರತಿಕ್ರಿಯೆ ಸಿಕ್ಕರೆ ಒಳ್ಳೆಯ ಬ್ರೇಕಿಂಗ್ ನ್ಯೂಸ್ ಆಗುತ್ತೆ ಅಂತಾನೆ

ವಾಣಿ ಆನಂದನಿಗೆ ಜಗದೀಶನನ್ನು ಮೀಟ್ ಮಾಡೋಕೆ ಆಗುತ್ತ ಅಂತ ಕೇಳ್ತಾಳೆ. ಆತ ಅವಾಯ್ಡ್ ಮಾಡೋಕೆ ಟ್ರೈ ಮಾಡ್ತಾನೆ. ಆಕೆ ಪಟ್ಟು ಹಿಡಿದು ಕೇಳಿದಾಗ ಒಲ್ಲದ ಮನಸ್ಸಿನಿಂದ ಒಪ್ತಾನೆ.

 

ದೃಶ್ಯ ೨೨

ಹಗಲು

ಕಾಡಿನಲ್ಲಿ

ವಾಣಿ, ಆನಂದ್,ಜಗದೀಶ

ಮಾಧ್ಯಮಕ್ಕೆ ಹೇಳಿಕೆ ಎಂದು ನೀಡುವಾಗ ಜಗದೀಶಜೊತೆಗಿದ್ದವರುಪೊಲೀಸರು ಆಕೆಯನ್ನು ಬಂಧಿಸಿಟ್ಟಿದ್ದರುಆಕೆಯನ್ನು ದೈಹಿಕವಾಗಿ ಬಳಸಿಕೊಂಡರುಅತ್ಯಾಚಾರದಿಂದಾಗಿ ಹುಟ್ಟಿದ ಮಗುಕಡೆಗೆ ಆಕೆಯನ್ನು ಗುಂಡಿಟ್ಟು ಕೊಂದು ಕಾಡಿನಲ್ಲಿ ಬಿಸಾಕಿದರು ಎನ್ನುವನು. ಪ್ರತೀಕಾರ ತೀರಿಸಿಕೊಳ್ಳುತ್ತದೆ ತಮ್ಮ ತಂಡ ಎನ್ನುವರು

ಜಗದೀಶನ ಜೊತೆ ತಿರುಗುತ್ತ ಮಾತನಾಡುವಾಗ ಆತನ ನೋಟ್ ಪುಸ್ತಕ ಓದ್ತಾಳೆಆತನ ಹ್ಯಾಂಡ್ ರೈಟಿಂಗ್ ಪರಿಚಯ ಸಿಕ್ಕುತ್ತೆ ಆನಂದನಿಗೆ

ಪುಸ್ತಕ ಹಿಂದಿರುಗಿಸುವಾಗ ಶುಭಾಳ ಫೋಟೊ ಕೆಳಕ್ಕೆ ಬೀಳುತ್ತೆ ಅದನ್ನು ಎತ್ತಿ ಜಗದೀಶನಿಗೆ ಕೊಡ್ತಾಳೆಆತನ ಕಣ್ಣಲ್ಲಿ ನೀರಿರುತ್ತೆ

 

ದೃಶ್ಯ ೨೩

ಹಗಲು

ಕಾರಿನೊಳಗೆ ಹಿಂದಿರುಗುವಾಗ

ವಾಣಿ,ಆನಂದ್

ಆಕೆಯ ಮಗುವಿನ ತಂದೆ ಯಾರು ಎನ್ನುವ ಬಗ್ಗೆ ಚರ್ಚೆಯಾಗುತ್ತೆ. ಆಕೆಗೆ ಆದ ಅನ್ಯಾಯ ದೊಡ್ಡದು ಎಂದು ಈಕೆ ವಾದಿಸುತ್ತಾಳೆ. ಈತ ಆಕೆಯ ತಂದೆಯ ಹುಡುಕಾಟಕ್ಕೆ ಅರ್ಥವಿಲ್ಲ. ಆಕೆಯ ಸಾವನ್ನು ಬಳಸಿ ಸಿಂಪಥಿ ಗಿಟ್ಟಿಸಿಕೊಳ್ಳಬಹುದೆಂದು ವಿವರಿಸುವನು. ಆತ ಸಾಮಾಜಿಕ ಹೋರಾಟದಲ್ಲಿ ಇಂತಹ ಬಲಿದಾನ ಅಗತ್ಯ ಎನ್ನುವನು.

ಪತ್ರಕರ್ತನಿಗೆ ಸಾಮಾಜಿಕ ಕಾಳಜಿ ಮುಖ್ಯ ಎಂದು ತಿಳಿ ಹೇಳ್ತಾನೆ.

 

ದೃಶ್ಯ ೨೪

ರಾತ್ರಿ

ಮನೆಯೊಳಗೆ

ವಾಣಿ

 

ಬಾಸ್ ಜೊತೆ ಚಾಟ್ ಆಕೆಯ ಮೇಲೆ ಅತ್ಯಾಚಾರವಾಗಿತ್ತು ಅದನ್ನ ಪರ್ಸನಲ್ ಸ್ಟೋರಿಯಾಗಿ ಮಾಡಬೇಕು. – ಬಾಸ್ ಹೇಳುತ್ತಾನೆಪೋಸ್ಟ್ ಮಾರ್ಟೆಮ್ ರಿಪೋರ್ಟ್ ಅದನ್ನೇ ಆಕೆ ಗರ್ಭಿಣಿಯಾಗಿದ್ದಳೆಂದು ಹೇಳುತ್ತೆ ಅನ್ನುತ್ತಾನೆಆದರೆ ಇದರಿಂದ ಪೊಲೀಸ್ ವರ್ಷನ್ ಸುಳ್ಳಾಗುತ್ತೆನಕಲಿ ಎನ್ ಕೌಂಟರ್ ಎಂದಾಗುತ್ತೆ ಅಂತಹೋಮ್ ಮಿನಿಸ್ಟರ್ ಕಡೆಯಿಂದ ಇನ್ಸ್ಟ್ರಕ್ಷನ್ ಬಂದಿದೆ– bury ಮಾಡ್ಬೇಕು ಅಂತ- ಸೋ ಫೈನಲ್ ಆಗಿ ರಿಪೋರ್ಟ್ ಕಳಿಸು- ಆನಂದ್ ಹೇಳಿಕೆ ರೆಕಾರ್ಡ್ ಮಾಡಿಸಿ-ವೀಕೆಂಡ್ ನಲ್ಲಿ ಕೆಮರಾಮನ್ ಕಳಿಸಿಕೊಡ್ತೀನಿ ಅಂತಾನೆ

ಕೂಡಲೇ ಆಕೆ ಬೌರಿಂಗ್ ಆಸ್ಪತ್ರೆಯ ಲೇಡಿ ಡಾಕ್ಟರ್ ಫ್ರೆಂಡ್ ಗೆ ಈ ಮೇಲ್ಶುಭಾಳ ಮಗು ಯಾರದೆಂದು ತಿಳಿಯಲು ಸಾಧ್ಯವಾ ಎಂದು ತಿಳಿಯುತ್ತಾಳೆ.

ಆಕೆ ಡಿ.ಎನ್.ಎ ಟೆಸ್ಟ್ ಮಾಡಬಹುದು ಅಂತಾಳೆ ಆದರೆ ಮ್ಯಾಚ್ ಮಾಡುವುದಕ್ಕೆ ಸ್ಯಾಂಪಲ್ಸ್ ಬೇಕು ಅಂತಾಳೆ

ಈಕೆ ಮಲಗುವಾಗ ಆನಂದನ ಬಾಚಣಿಕೆಯಲ್ಲಿನ ಕೂದಲು ಬಿಡಿಸಿ ಇಟ್ಟುಕೊಳ್ತಾಳೆ

ದೃಶ್ಯ ೨೫

ಹಗಲು

ಮನೆಯೊಳಗೆ

ವಾಣಿ,ಶುಭಾ ತಂದೆ

 

ಆಪ್ತವಾಗಿ ಮಾತಾಡಲು ಹೋಗ್ತಾಳೆ. ಮನೆಯಲ್ಲಿ ಓಡಾಡುವಾಗ ತಂದೆ ಆಕೆಯ ಬಗ್ಗೆ ಹೇಳ್ತಾನೆ. ಆಕೆ ಹಾಳಾದಳು ಅಂತ ದಯವಿಟ್ಟು ತೋರಿಸ್ಬೇಡಮ್ಮ ಅಂತ ಕೇಳ್ತಾನೆ. ಈಗ ಒಳ್ಳೆಯ ಹೆಸರು ಬಂದಿದೆ ಅವಳು ಸತ್ತು. ರಹಸ್ಯವಾಗಿಟ್ಟಿದ್ದ ಶುಭಾಳ ಪತ್ರಗಳನ್ನು ಕೊಡುತ್ತಾನೆ.

ಆಕೆಗೆ ಆನಂದನ ಮೇಲೆ ಪ್ರೀತಿ ಇದ್ದದ್ದು ತಿಳಿಯುತ್ತೆ.

 

ದೃಶ್ಯ ೨೬

ಸಂಜೆ

ತೋಟದಲ್ಲಿ

ವಾಣಿ,ಆನಂದ್,ಕೆಮರಾಮನ್

 

ಕಡೆಯ ರಿಪೋರ್ಟಿಗಾಗಿ ಬೈಟ್ ಪಡಿಯೋಕೆ ಕ್ಯಾಮರಾ ಇಡುವಾಗ ವಾಣಿಗೆ ಮೆಸೇಜ್ ಬರುತ್ತೆ. ಡಿ ಎನ್ ಎ ಮ್ಯಾಚ್ ಆಗಿದೆ ಅಂತ

ಆನಂದ ಮಾತನಾಡುತ್ತಾ ಶುಭಾಳ ಸಾವಿಗೆ ವ್ಯವಸ್ಥೆ ಹೇಗೆ ಕಾರಣ ಅಂತ ವಿವರಿಸ್ತಾನೆ.

ಸಂದರ್ಶನ ನಂತರ ತನಗೆ ಅರ್ಚಕರ ಮನೆಯಲ್ಲಿ ಕೆಲಸವಿದೆ. ಯಾವುದಕ್ಕೂ ಇರಲಿ ಶಾಂತಿ ಮಾಡಿಸು ಅಂತ ಅಪ್ಪ ಹೇಳಿದರು ಅನ್ನುತ್ತಾನೆ.

ಈಕೆ ಶೂಟಿಂಗ್ ಮುಗಿದ ನಂತರ. ಕ್ಯಾಮರಾ ಮನ್ ಗೆ ತಾನೂ ವಾಪಸ್ಸು ಬಂದು ಬಿಡುವುದಾಗಿ ಹೇಳ್ತಾಳೆ.

ದೃಶ್ಯ ೨೭

ರಾತ್ರಿ

ಮನೆಯೊಳಗೆ

ಆನಂದ್

ಮನೆಗೆ ಬಂದಾಗ ವಾಣಿ ಬೆಂಗಳೂರಿಗೆ ವಾಪಸ್ ಹೋಗಿರುವುದು ತಿಳಿಯುತ್ತೆ. ಟಿವಿ ಆನ್ ಮಾಡಿದಾಗ ವಾಣಿಯ ರಿಪೋರ್ಟ್ ಬರ್ತಿರುತ್ತೆ.

ಟಿಪಾಯ್ ಮೇಲೆ ಲಕೋಟೆಯೊಂದಿರುತ್ತೆ ಅದರಲ್ಲಿ ವಾಣಿಯ ಎಂಗೇಜ್ ಮೆಂಟ್ ರಿಂಗ್ ಇರುತ್ತೆ.

ಜೊತೆಗೆ ವಿದಾಯದ ಪತ್ರ.

October 9, 2010

ಸಿನೆಮಾ ಓದುವುದು ಹೇಗೆ ಶಿಬಿರದ ಕುರಿತು…

ಮೂರು ದಿನಗಳ (ಆಗಸ್ಟ್ ೨೭,೨೮,೨೯) ಕಾಲ ತುಮಕೂರು ಬಳಿಯ ರಮಣೀಯವಾದ ಓದೇಕರ್ ಎಸ್ಟೇಟಿನಲ್ಲಿ ನಡೆದ ಸಿನೆಮಾ ಓದುವುದು ಹೇಗೆ ಎನ್ನುವ ಕಾರ್ಯಾಗಾರದ ಕುರಿತ ನನ್ನ ಅನಿಸಿಕೆಗಳನ್ನು ಹಂಚಿಕೊಳ್ಳುವ ಮುನ್ನ ಸಿನೆಮಾ, ಸಿನೆಮಾ ವಿಮರ್ಶೆಗಳ ಕುರಿತು ನನಗೆ ಹೇಗೆ ಆಸಕ್ತಿ ಬೆಳೆಯಿತು ಎಂಬುದನ್ನು ನೆನಪಿಸಿಕೊಳ್ಳುವುದು ಸೂಕ್ತವೆಂದು ಭಾವಿಸುತ್ತೇನೆ.

ಸಾಹಿತ್ಯ, ಸಿನೆಮಾ, ಕ್ರೀಡೆ, ಕಲೆ, ವಿಜ್ಞಾನ, ಶಿಕ್ಷಣ, ತಂತ್ರಜ್ಞಾನ ಹೀಗೆ ಯಾವುದೇ ಕ್ಷೇತ್ರದಲ್ಲಿ ಎರಡು ಬಗೆಯ ಪರಿಣಿತರು ಇರುತ್ತಾರೆ. ಆ ಕ್ಷೇತ್ರದಲ್ಲಿ ಇಷ್ಟವಿದ್ದೋ ಇಲ್ಲದೆಯೋ ತೊಡಗಿಸಿಕೊಂಡು, ಹಲವು ವರ್ಷಗಳ ಅನುಭವವನ್ನು ಗಳಿಸಿಕೊಂಡು ಆ ಕ್ಷೇತ್ರದ ಪ್ರತಿನಿಧಿಗಳಾಗಿರುವಂಥವರು ಒಂದು ಗುಂಪಿನವರು. ಇವರಿಗೆ ಆಯಾ ಕ್ಷೇತ್ರದಲ್ಲಿ ಉತ್ತಮ ಪರಿಣಿತಿ ಇರುತ್ತದೆಯಾದರೂ ತಮಗೆ ತಿಳಿದೋ ತಿಳಿಯದೆಯೋ ಆ ಕ್ಷೇತ್ರದ ಸಿದ್ಧ ಮಾದರಿಗಳಿಗೆ, ಮಿತಿಗಳಿಗೆ ತಮ್ಮನ್ನು ಒಪ್ಪಿಸಿಕೊಂಡವರಾಗಿರುತ್ತಾರೆ. ಇನ್ನೊಂದು ಗುಂಪಿನ ಪರಿಣಿತರು ಯಾವುದೇ ಅಧಿಕೃತ ಗುರುತಿಸುವಿಕೆಯನ್ನು ಹೊಂದಿರುವುದಿಲ್ಲವಾದರೂ ಆ ಕ್ಷೇತ್ರದ ಬಗೆಗಿನ ಅವರ ವಯಕ್ತಿಕ ಆಸಕ್ತಿ, ಪರಿಶ್ರಮದಿಂದ ಅವರು ಸಿದ್ಧಿಸಿಕೊಂಡ ಅಧಿಕಾರಯುತ ತಿಳುವಳಿಕೆಯಿಂದಾಗಿ ಅವರಿಗೆ ಮನ್ನಣೆ ದೊರೆಯುತ್ತದೆ. ಈ ಎರಡನೆಯ ಗುಂಪಿನವರು ತಮ್ಮ ಶ್ರದ್ಧೆ, ತಮ್ಮ ಕೃಷಿಯಿಂದ ಆ ಕ್ಷೇತ್ರವನ್ನು ಬೆಳೆಸುವುದರ ಜೊತೆಗೆ ತಮ್ಮಲ್ಲಿ ತುಡಿಯುವ ಪ್ಯಾಶನ್ ನಿಂದಾಗಿ ಹಲವು ಮಂದಿಗೆ ಪ್ರತ್ಯಕ್ಷ ಇಲ್ಲವೇ ಪರೋಕ್ಷವಾಗಿ ದೀಕ್ಷೆ ಕೊಡುವಂಥವರಾಗಿರುತ್ತಾರೆ.

ಸ್ವತಃ ವಿಜ್ಞಾನದ ವಿದ್ಯಾರ್ಥಿಯಾಗಿದ್ದುಕೊಂಡು ವಿಜ್ಞಾನದ ಬಗೆಗಿನ ತಮ್ಮ ಪ್ಯಾಶನ್ ನಿಂದ ಹಲವರನ್ನು ವಿಜ್ಞಾನದೆಡೆಗೆ ಸೆಳೆದ ಕೆಲವು ವ್ಯಕ್ತಿಗಳನ್ನು ನಾನು ಹೆಸರಿಸಲು ಇಚ್ಚಿಸುವೆ. ಕಾರ್ಲ್ ಸೇಗನ್, ರಿಚರ್ಡ್ ಫೀಮನ್, ನಾಗೇಶ್ ಹೆಗಡೆ, ಪೂರ್ಣ ಚಂದ್ರ ತೇಜಸ್ವಿ. ಇವರಲ್ಲಿ ಮೊದಲ ಈರ್ವರು ವಿಜ್ಞಾನಿಗಳಾಗಿಯೇ ದುಡಿದವರು. ಆದರೆ ಈ ನಾಲ್ಕು ಮಂದಿಯಲ್ಲಿ ಸಮಾನವಾಗಿ ಕಾಣುವ ಅಂಶ: ವಿಜ್ಞಾನದ ಜೀವಸತ್ವವನ್ನು ಹೀರಿಕೊಂಡು ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಂಡದ್ದು. ವಿಜ್ಞಾನ ಅವರಿಗೆ ಕೇವಲ ಪೇಟೆಂಟ್ ಸಂಪಾದನೆಯ, ಮಾಹಿತಿ ಸಂಗ್ರಹದ ಕ್ಷೇತ್ರವಾಗಿರಲಿಲ್ಲ. ಅದು ಅವರ ಜೀವನ ದೃಷ್ಟಿ, ಅವರ ವ್ಯಕ್ತಿತ್ವನ್ನು ರೂಪಿಸುವ ಶಕ್ತಿಯಾಗಿತ್ತು. ಇಂತಹ ವ್ಯಕ್ತಿಗಳು ವಿಜ್ಞಾನದ ಬಗ್ಗೆ ಮಾತನಾಡಿದರೆ ಸಾಕು ಯುನಿವರ್ಸಿಟಿ ಪ್ರೊಫೆಸರ್ ಗಳು ಉಂಟುಮಾಡಲು ಸಾಧ್ಯವಾಗದ ಉತ್ಸಾಹ, ಆಸಕ್ತಿ ಕೇಳುಗರಲ್ಲಿ ಉದಿಸುತ್ತದೆ.

ಸಿನೆಮಾ ಕುರಿತು ನನ್ನಲ್ಲಿ ಇಂಥದ್ದೇ ಬೆರಗು, ಆಸಕ್ತಿಯನ್ನು ಮೂಡಿಸಿದ್ದು ಶೇಖರ್ ಪೂರ್ಣ ಸರ್. ಸಂವಾದ ಡಾಟ್ ಕಾಮ್ ಆಯೋಜಿಸಿದ್ದ ಒಂದೆರಡು ಸಂವಾದಗಳಲ್ಲಿ ಸುಮ್ಮನೆ ಕುತೂಹಲದಿಂದ ಭಾಗವಹಿಸಿದವನಿಗೆ ಮನರಂಜನೆಯ ಉದ್ದೇಶದಿಂದ ನಿರ್ಮಿತವಾದ, ಜನಪ್ರಿಯ ಮಾನದಂಡದಲ್ಲಿ ‘ಸೀರಿಯಸ್’ ಅಲ್ಲದ ಸಿನೆಮಾಗಳನ್ನು ಕುರಿತು ಅಕಾಡೆಮಿಕ್ ಶಿಸ್ತಿನಲ್ಲಿ ಚರ್ಚೆ ನಡೆಸಬೇಕು ಎನ್ನುವ ಅವರ ಅಭೀಪ್ಸೆಯೇ ವಿಚಿತ್ರವಾಗಿ ಕಾಣುತ್ತಿತ್ತು. ಸಿನೆಮಾ, ನಾಟಕಗಳ ಶಾಸ್ತ್ರೀಯ ವಿಶ್ಲೇಷಣೆಗೆ ಸಂವಾದ ಡಾಟ್ ಕಾಮ್ ಶುರು ಮಾಡಿದ ಶೇಖರ್ ಪೂರ್ಣರ ತಂಡದ ನೈಜ ಉದ್ದೇಶ ಹಾಗೂ ಅವರ ಕೆಲಸದ ಸ್ವರೂಪದ ಬಗ್ಗೆ ಅವರು ಆಯ್ದುಕೊಂಡ ಸಿನೆಮಾದ ನಿರ್ದೇಶಕರುಗಳಿಗೇ ಸ್ಪಷ್ಟತೆ ಇಲ್ಲದಿದ್ದುದರಿಂದ ಸಂವಾದಗಳಲ್ಲಿ ಶೇಖರ್ ಪೂರ್ಣರೂ ಹೆಚ್ಚಾಗಿ ಮಾತನಾಡಬೇಕಾಗಿ ಬರುತ್ತಿದುದನ್ನು ಗುರುತಿಸಿದ್ದೆ. ಮೇಲಾಗಿ ಕಲಾಕೃತಿಯೊಂದರಲ್ಲಿ ಇಲ್ಲದ್ದನ್ನು ಆರೋಪಿಸಿ ಕೇವಲ ಬೌದ್ಧಿಕ ಬಡಿವಾರದಿಂದ ಶ್ರೇಷ್ಟ ಕೃತಿಯನ್ನು ಕನಿಷ್ಠವೆಂದೂ, ಕಳಪೆ ಕೃತಿಯನ್ನು ಉತ್ಕೃಷ್ಟವೆಂದೂ ನಿರೂಪಿಸುವ ವಿಮರ್ಶಕರ ವಿಮರ್ಶಾ ಪದ್ಧತಿಯ ಕುರಿತು ಭಯ ನನ್ನಲ್ಲಿತ್ತು.

 
ಹೀಗೆ ಕುತೂಹಲ, ಸಂಶಯ, ಭಯಗಳಿಂದ ಶೇಖರ್ ಪೂರ್ಣರ ಮಾತುಗಳಿಗೆ ನನ್ನನ್ನು ನಾನು ತೆರೆದುಕೊಂಡಂತೆ ಅವರ ಪ್ರಯತ್ನದ ಕುರಿತು ಗೌರವ ಬೆಳೆಯುತ್ತಾ ಹೋಯಿತು. ಒಂದು ಶನಿವಾರದ ಸಂಜೆ ಅವರ ಅಪಾರ್ಟ್ ಮೆಂಟ್ ಕೋಣೆಯಲ್ಲಿ ಕೂತು ಕೆದಕಿ ಕೆದಕಿ ಪ್ರಶ್ನಿಸುತ್ತಾ ಮನರಂಜನೆಯ ಸರಕು ಎಂದು ಉಡಾಫೆಯಿಂದ ಕಾಣುತ್ತಿದ್ದ ಸಿನೆಮಾ ಬಗ್ಗೆ ನನಗೆ ತಿಳಿಯದೇನೇ ಆಸಕ್ತಿ ಬೆಳೆಯುತ್ತಾ ಹೋಯಿತು.

ಮುಂಗಾರು ಮಳೆ

ಮುಂಗಾರು ಮಳೆ ಕನ್ನಡ ಚಿತ್ರರಂಗದಲ್ಲಿ ದೊಡ್ಡದೊಂದು ಬಿರುಗಾಳಿಯನ್ನೇ ಎಬ್ಬಿಸಿದ ಸಿನೆಮ. ಗುಣಮಟ್ಟದಲ್ಲೂ ಜನಪ್ರಿಯತೆಯಲ್ಲೂ ಹೊಸದೊಂದು ಎತ್ತರವನ್ನು ಸ್ಥಾಪಿಸಿದ ಸಿನೆಮ. ಒಂದು ಕವನದ ಕುರಿತು, ಒಂದು ಕಥೆಯ ಕುರಿತು ತೀರಾ ವಿಚಕ್ಷಣತೆಯಿಂದ ವಿಮರ್ಶೆಯನ್ನು ಬರೆಯುವ, ಸಾಹಿತ್ಯದಲ್ಲಿ ಅತಿ ಶಕ್ತಿಶಾಲಿಯಾದ ಒರೆಗಲ್ಲುಗಳನ್ನು ಆವಿಷ್ಕರಿಸಿ ಕೃತಿಗಳನ್ನು ತೀಡಿ ನೋಡುವ ವಿಮರ್ಶಕರು ತುಂಬಿರುವ ನಮ್ಮ ನೆಲದಲ್ಲಿ ಆ ಮಟ್ಟಿಗಿನ ಸಂಚಲನವನ್ನು ಉಂಟು ಮಾಡಿದ ಮುಂಗಾರು ಮಳೆ ಕುರಿತು ಮೇಲ್ಪದರದ ಗಮನಿಸುವಿಕೆಗಳನ್ನು ದಾಟಿದ, ಆಳಕ್ಕೆ ಇಳಿಯುವ ವಿಮರ್ಶೆಗಳೇ ಬರಲಿಲ್ಲ ಎನ್ನುವುದನ್ನು ಗುರುತಿಸುವಂತೆ ಮಾಡಿದರು.

ಇಂದು ನಮ್ಮ ನಡುವೆ ಇಲ್ಲದ, ನಮ್ಮ ಚಿತ್ರಮಂದಿರಗಳಲ್ಲೆಲ್ಲೂ ಬಿಡುಗಡೆಯಾಗದ ಸತ್ಯಜಿತ್ ರೇ, ಅಕಿರ ಕುರಸಾವ, ಬರ್ಗ್ ಮನ್ ಮೊದಲಾದವರ ಚಿತ್ರಗಳು ಇಂದಿಗೂ ಸಿನೆಮಾ ಆಸಕ್ತರ ಗಮನ ಸೆಳೆಯುತ್ತಿರುವುದು, ಅವುಗಳು ಇಂದಿಗೂ ಪ್ರಸ್ತುತವಾಗಿರುವುದಕ್ಕೆ ಅವುಗಳ ಕುರಿತು ರಚನೆಯಾಗಿರುವ ಟೆಕ್ಸ್ಟ್ (ಪಠ್ಯ) ಕಾರಣ. ಇಂತಹ ಪ್ರಯತ್ನ ಕನ್ನಡದಲ್ಲಿ ಎಲ್ಲೂ ಕಾಣ ಬರುವುದಿಲ್ಲ. ಮುಂಗಾರು ಮಳೆಯಂತಹ ಅತ್ಯಂತ ಪ್ರಭಾವಶಾಲಿ ಸಿನೆಮಾವನ್ನು ಕನ್ನಡದ ಪ್ರಜ್ಞಾವಂತ ಪ್ರೇಕ್ಷಕ ಅರ್ಥ ಮಾಡಿಕೊಂಡ ರೀತಿ ಎಂಥದ್ದು? ಅಂತಹ ಒಂದು ಫಿನಾಮೆನಾನ್‌ಗೆ ಕನ್ನಡಿಗರು ಒಂದು ಸಮಾಜವಾಗಿ ಬೌದ್ಧಿಕ ನೆಲೆಯಲ್ಲಿ ಪ್ರತಿಕ್ರಿಯಿಸಿದ್ದು ಹೇಗೆ? ಆ ಸಿನೆಮಾ ಆ ಮಟ್ಟಿಗಿನ ಯಶಸ್ಸನ್ನು ಕಾಣುವುದಕ್ಕೆ, ಆ ಸಿನೆಮಾದ ಬಿಡಿ ಬಿಡಿಯಾದ ತಾಂತ್ರಿಕ ಕೌಶಲ್ಯವನ್ನು ನಕಲು ಮಾಡಿದರೂ ಉಳಿದ ಸಿನೆಮಾಗಳು ಆ ಮಟ್ಟಿಗಿನ ಸಂಚಲನ ಉಂಟು ಮಾಡುವುದಕ್ಕೆ ಏಕೆ ಸೋತವು? ಇಷ್ಟಕ್ಕೂ ಮುಂಗಾರು ಮಳೆಯಂತಹ ಸಿನೆಮಾ ಏನು ಹೇಳುತ್ತದೆ? ಅದು ಆ ಮಟ್ಟಿಗೆ ಜನಪ್ರಿಯವಾಗುವುದಕ್ಕೆ ಸಮಾಜದ ಯಾವ ತಂತಿಯನ್ನು ಮೀಟಿದ್ದು ಕಾರಣ? ಮೊದಲಾದ ಪ್ರಶ್ನೆಗಳಿಗೆ ನಾವು ಉತ್ತರವನ್ನು ಕಂಡುಕೊಳ್ಳಬೇಕೆಂದು ಪ್ರಯತ್ನಿಸುವ ಜವಾಬ್ದಾರಿತನವನ್ನೂ ತೋರಲಿಲ್ಲ ಎಂದು ಅವರು ಹೇಳಿದಾಗ ನನ್ನ ನಾನು ಪ್ರಶ್ನಿಸಿಕೊಳ್ಳಲಾರಂಭಿಸಿದೆ.

ಸಿನೆಮಾ ಓದುವುದೆಂದರೆ?

ಮುಂಗಾರು ಮಳೆಯನ್ನೇ ರೆಫರೆನ್ಸ್ ಪಾಯಿಂಟ್ ಆಗಿ ಇಟ್ಟುಕೊಂಡು ಆಲೋಚಿಸಿದರೆ ಸಿನೆಮಾ ಓದುವ ಕುರಿತ ಸ್ಪಷ್ಟತೆ ಸಿಕ್ಕಬಹುದು. ಮುಂದುವರಿಯುವ ಮೊದಲು ಕೆಲವು ಮೇಲ್ನೋಟದ ಅನಿಸಿಕೆಗಳಿಗೆ, ಸಿನಿಕತನದ ಪ್ರತಿಕ್ರಿಯೆಗಳಿಗೆ ಸಮಾಧಾನ ಕಂಡುಕೊಳ್ಳಲು ಇಚ್ಚಿಸುತ್ತೇನೆ.

ಒಂದು ಸಿನೆಮ ಕತೆ, ಚಿತ್ರ ಕಥೆ, ಸಂಭಾಷಣೆ, ನಿರ್ದೇಶನ, ಸಂಗೀತ ಸಂಯೋಜನೆ,ಛಾಯಾಗ್ರಹಣ, ನಿರ್ಮಾಣ ಹೀಗೆ ಎಲ್ಲಾ ಹಂತಗಳಲ್ಲಿ ಮನರಂಜನೆ ಹಾಗೂ ಹಣದ ಗಳಿಕೆಯನ್ನೇ ಗುರಿಯಾಗಿಟ್ಟುಕೊಂಡು ನಿರ್ಮಾಣವಾಗಿರುವಾಗ ಅದನ್ನು ಕುರಿತು ಬೌದ್ಧಿಕ ಚರ್ಚೆ ಮಾಡುವುದು, ಆ ಸಿನೆಮಾ ಏನನ್ನು ಹೇಳುತ್ತದೆ ಎಂದು ಪ್ರಶ್ನಿಸುವುದರ ಅವಶ್ಯಕತೆಯೇನು? ಇದರಿಂದ ಯಾವ ಪುರುಷಾರ್ಥ ಸಿದ್ಧಿಸುತ್ತದೆ? ಮುಂಗಾರು ಮಳೆ, ಮೊಗ್ಗಿನ ಮನಸ್ಸು, ಕೃಷ್ಣನ್ ಲವ್ ಸ್ಟೋರಿ, ಮನಸಾರೆ ಇಂತಹ ಸಿನೆಮಾಗಳು ಮನರಂಜನೆಗಾಗಿ ತಯಾರಾಗಿರುವಂಥವು. ಅವು ಏನನ್ನೂ ಹೇಳುವುದಿಲ್ಲ. ಹಾಗೆ ಸಿನೆಮಾವನ್ನು ಅರ್ಥ ಮಾಡಿಕೊಳ್ಳುವ, ಗಂಭೀರವಾಗಿ ತೊಡಗಿಕೊಳ್ಳುವ ಉದ್ದೇಶವೇ ಇದ್ದರೆ ಪಿ.ಶೇಷಾದ್ರಿ, ಗಿರೀಶ್ ಕಾಸರವಳ್ಳಿ ಮೊದಲಾದವರ ಸೀರಿಯಸ್ ಚಿತ್ರಗಳನ್ನೇ ಏಕೆ ಆಯ್ದುಕೊಳ್ಳಬಾರದು? ಅಂತಹ ಸಿನೆಮಾಗಳು ನಾವು ಕಾಣಬಯಸುವ ‘ಸಿನೆಮಾ ಸಾಹಿತ್ಯ’ ತುಂಬಿಕೊಂಡವಾಗಿರುತ್ತವೆ ಎಂದು ಒಂದು ವಾದವಿದೆ. ‘ಸಿನೆಮಾ ಓದುವುದು ಹೇಗ’ ಶಿಬಿರದಲ್ಲಿಯೂ ಈ ಪ್ರಶ್ನೆ ಅನೇಕರ ಬಾಯಿಂದ ಹೊರಟಿತ್ತು.

ಸಿನೆಮಾಗಳಲ್ಲಿ ಆರ್ಟ್ ಸಿನೆಮಾ ಕಮರ್ಶಿಯಲ್ ಸಿನೆಮಾ ಇವೆರಡೂ ಅಲ್ಲದ ಅಥವಾ ಇವೆರಡೂ ಆಗಲು ಹೊರಟ ಬ್ರಿಜ್ ಸಿನೆಮಾ ಮೊದಲಾದ ವರ್ಗೀಕರಣಗಳು ಆಯಾ ಸ್ಥಳದ ಹಾಗೂ ಕಾಲದ ಪರಿಸ್ಥಿತಿಗಳಿಂದ ನಿರ್ಮಿತವಾದವುಗಳಷ್ಟೇ. ಆರ್ಟ್ ಸಿನೆಮಾ ಎಂಬ ಹಣೆ ಪಟ್ಟಿ ಹೊತ್ತು ತೀರಾ ಗಂಭೀರ ವಸ್ತುವನ್ನು ತೊಡಗಿಸಿಕೊಂಡು ಪ್ರಶಸ್ತಿ ಸಂಪಾದಿಸಿಕೊಂಡ ಸಿನೆಮಾ ವಸ್ತುನಿಷ್ಠ ನೆಲೆಯಲ್ಲಿ (objective perspective) ಅತಿ ಕೆಟ್ಟ ಸಿನೆಮಾ ಆಗಿರಬಹುದು. ಎಷ್ಟೇ ಸೃಜನಶೀಲವಾದ ನಿರ್ದೇಶಕನ ಪ್ರಯತ್ನವು ಸಿನೆಮಾದಲ್ಲಿ ತೊಡಗಿದ್ದರೂ ಸಿನೆಮಾ ಒಂದು ಸೃಜನಶೀಲ ಕೃತಿಯಾಗಿ ರೂಪುಗೊಳ್ಳುವುದರಲ್ಲಿ ಸೋತಿರಬಹುದು. ಮನರಂಜನೆಯ ಮಾನದಂಡದಿಂದಲೇ ನಿರ್ಮಿತವಾದ ಸಿನೆಮ ಯಾವುದೋ ಮಾಂತ್ರಿಕ ಪ್ರಭಾವಳಿಯನ್ನು ಪಡೆದು ಸೃಜನಶೀಲ ಕೃತಿಯಾಗಿ ಹೊಮ್ಮಿ ಬಿಟ್ಟಿರಬಹುದು. ಸ್ವತಃ ನಿರ್ದೇಶಕ, ನಿರ್ಮಾಪಕರ, ನಟರ ಗ್ರಹಿಕೆಯನ್ನೂ ಮೀರಿದ ಸ್ತರಕ್ಕೆ ಚಾಚಿಕೊಂಡಿರಬಹುದು. ಇದನ್ನೆಲ್ಲಾ ನಿರ್ಧರಿಸುವುದಕ್ಕೆ ವೈಜ್ಞಾನಿಕವಾದ, ವಸ್ತುನಿಷ್ಠವಾದ, ವಯಕ್ತಿಕ ಇಷ್ಟ- ವರ್ಜ್ಯಗಳನ್ನು ಮೀರಿದ ದೃಷ್ಟಿ ಅಗತ್ಯ.

ಶೇಖರ್ ಪೂರ್ಣ ಸದಾ ಉಲ್ಲೇಖಿಸುವ ಹೇಳಿಕೆಯೊಂದನ್ನು ನೆನಪಿಸಿಕೊಳ್ಳಬಯಸುವೆ: ‘Don’t trust the author’. ಓದುಗನಿಗೆ ಅಥವಾ ಪ್ರೇಕ್ಷಕನಿಗೆ ಮುಖ್ಯವಾಗಬೇಕಿರುವುದು ಕೃತಿಯೊಂದೇ. ಅದನ್ನು ಬುದ್ಧಿಜೀವಿಯಾದ ಕಲಾ ಸಿನೆಮಾ ನಿರ್ದೇಶಕನು ನಿರ್ಮಿಸಿದ್ದೋ ಅಥವಾ ಕಮರ್ಶಿಯಲ್ ನಿರ್ದೇಶಕನು ನಿರ್ಮಿಸಿದ್ದೋ ಎನ್ನುವುದು ಮುಖ್ಯವಾದರೆ ನಾವು ಕೃತಿಗೆ ನಿಷ್ಠರಾಗಿ ಉಳಿಯುವುದಿಲ್ಲ.

ವಿಮರ್ಶೆಯೋ ವರದಿಯೋ?

ವಿಮರ್ಶೆಯಲ್ಲಿ ಇಂತಹ ದೃಷ್ಟಿಕೋನದ ಅಗತ್ಯವನ್ನು ಮನಗಂಡು ಅದರ ಆವಿಷ್ಕಾರ, ಪರಿಷ್ಕರಣೆಯಲ್ಲಿ ತೊಡಗಿಕೊಂಡ ವಿಮರ್ಶಕರು ಕನ್ನಡ ಸಾಹಿತ್ಯದಲ್ಲಿ ಅನೇಕ ಮಂದಿಯಿದ್ದಾರೆ. ವಿಮರ್ಶೆಯ ಸ್ವರೂಪದ ಕುರಿತೇ ಸಂವಾದಗಳು ಸಾಹಿತ್ಯದ ಜಗಲಿಯಲ್ಲಿ ನಡೆಯುತ್ತಿವೆ. ಹತ್ತಾರು ಕಾದಂಬರಿಗಳನ್ನು ಓದಿಕೊಂಡ ಸಾಮಾನ್ಯ ಓದುಗ ಸಹ ಕೃತಿಯೊಂದನ್ನು ಕೃತಿಕಾರನ, ವಸ್ತುವಿನ, ನಿರೂಪಣೆಯ ತಂತ್ರದ ಹಂಗಿಲ್ಲದೆ ಕಾಣಬೇಕು ಎಂಬ ಎಚ್ಚರವನ್ನು ಹೊಂದಿರುತ್ತಾನೆ. ಆದರೆ ಸಿನೆಮಾ ವಿಮರ್ಶೆ ಹೇಗಿದೆ?

ಆರ್ಟ್ ಸಿನೆಮ ಎಂದು ಪ್ರತ್ಯೇಕ ವರ್ಗೀಕರಣದಡಿಯಲ್ಲಿ ತಯಾರಾಗುವ ಸಿನೆಮಾಗಳು ಕನ್ನಡದ ಮಟ್ಟಿಗೆ ತೀರಾ ಸಾಹಿತ್ಯಿಕವಾದವುಗಳು. ಕಾದಂಬರಿಯನ್ನೋ, ಕಥೆಯನ್ನೋ ಆಧರಿಸಿ ರೂಪಿಸಲ್ಪಡುವ ಸಿನೆಮಾಗಳು. ಇಂತಹ ಸಿನೆಮಾಗಳಲ್ಲಿ ಸಾಹಿತ್ಯಿಕವಾಗಿ ಮುಖ್ಯವಾಗುವ ಸಮಸ್ಯಾತ್ಮಕ ನಿರೂಪಣೆ, ವಿವಿಧ ಪಾತ್ರಗಳನ್ನು ಸೃಷ್ಟಿಸಿ ಅವುಗಳು ಮುಖಾಮುಖಿಯಾಗುವ ಸಾಹಿತ್ಯದ ಶೈಲಿಯೇ ಮುಖ್ಯವಾಗುತ್ತದೆ. ಇಂತಹ ಸಿನೆಮಾವನ್ನು ಕಥೆಯಾಗಿ ಬರೆದರೂ ಯಾವುದೇ ನಷ್ಟವಾಗದಂತೆ ದಾಟಿಸಬಹುದು. ಇಂತಹ ಸಿನೆಮಾಗಳ ಕುರಿತು ಅಕಾಡೆಮಿಕ್ ಚರ್ಚೆಗಳಾಗುತ್ತವೆಯಾದರೂ ಒಟ್ಟಾರೆಯಾಗಿ ಅದರಿಂದ ಸಿನೆಮಾ ವಿಮರ್ಶೆಗೆ, ಸಿನೆಮಾಗಳನ್ನು ಆಳವಾಗಿ ಗ್ರಹಿಸುವ ಹಸಿವು ಇರುವವರ ಸಾಮಾನ್ಯ ಪ್ರೇಕ್ಷಕರ ನೆರವಿಗೆ ಅವು ಒದಗುವುದಿಲ್ಲ.

ಜನಪ್ರಿಯ ಚಿತ್ರಗಳನ್ನು ಕುರಿತು ಪತ್ರಿಕೆಗಳಲ್ಲಿ ಪ್ರಕಟವಾಗುವ ವಿಮರ್ಶೆಗಳು ಹೆಣ್ಣು ಕುದುರೆ ಹಾಗೂ ಗಂಡು ಕತ್ತೆಯ ಸಂತಾನವಾದ mule ರೀತಿ ಇರುತ್ತವೆ. ಕ್ರಿಕೆಟ್ ವರದಿಗೂ, ಪ್ರಶಸ್ತಿ ಪ್ರದಾನ ಸಮಾರಂಭದ ವರದಿಗೂ, ಹೊಸ ರುಚಿಯ ಬರಹಕ್ಕೂ ಸಿನೆಮಾ ವಿಮರ್ಶೆಗೂ ವ್ಯತ್ಯಾಸವೇ ಇರುವುದಿಲ್ಲ. ನಾಯಕ ಸ್ವಲ್ಪ ಅಳುವುದನ್ನು ಕಲಿಯಬೇಕು, ನಟಿ ಬಟ್ಟೆ ಕಡಿಮೆ ಮಾಡಿದಷ್ಟೇ ತನ್ನ ನಟನೆಯಲ್ಲಿನ ಕೃತಕತೆಯನ್ನು ಕಡಿಮೆ ಮಾಡಬೇಕು, ಹಾಡುಗಳು ಸುಮಾರಾಗಿವೆ, ಛಾಯಾಗ್ರಾಹಕ ಕ್ಯಾಮರಾದೊಂದಿಗೆ ಪಳಗಬೇಕು, ನಿರ್ಮಾಪಕ ಇನ್ನಷ್ಟು ಗಂಟು ಬಿಚ್ಚಬೇಕು- ಹೀಗೆ ಮೊದಲಾದ ಕೆಲವು ತೀರಾ ವೈಯಕ್ತಿಕ ಇಷ್ಟಾ ನಿಷ್ಟವನ್ನು ಅವಲಂಬಿಸಿದ ಅಭಿಪ್ರಾಯಗಳನ್ನು ಪೋಣಿಸಿ, ಪಂಚಿಂಗ್ ಎನ್ನಿಸುವ, ಸರ್ಕಾಸ್ಟಿಕ್ ರಿಮಾರ್ಕುಗಳನ್ನು ಕಲೆ ಹಾಕಿ ವಿಮರ್ಶೆ ಬರೆದು ಕೈ ತೊಳೆದುಕೊಳ್ಳುತ್ತಾರೆ. ಇಲ್ಲವೇ ಆಫೀಸು ಗಾಸಿಪ್ಪು, ಅಕ್ಕ ಪಕ್ಕದ ಮನೆಯ ಸಂಸಾರದ ಕತೆಗಳಂತೆ ಸಿನೆಮಾ ಕತೆಯನ್ನು ಹೇಳಿಬಿಡುವುದು, ಆ ಕಥೆ ತಮ್ಮಲ್ಲಿ ಉಂಟು ಮಾಡಿದ ಭಾವನೆಗಳನ್ನು, ತಮ್ಮ ಬದುಕಿನಲ್ಲಿ ಮಾಡಿದ ಪ್ರಭಾವವನ್ನು ನೆನೆದು ಕಣ್ಣೀರಿಡುವುದು ಇವಿಷ್ಟೇ ವಿಮರ್ಶೆಯ ಹಾದಿಯನ್ನು ಮಂಜಿನ ಹಾಗೆ ಕವಿದು ಮಸುಕಾಗಿವೆ. ನನ್ನ ಹಲವಾರು ಸಿನೆಮಾ ವಿಮರ್ಶೆಗಳನ್ನು ಓದಿದರೂ ನನಗೆ ಕಾಣುವುದು ಇದೇ mule ಮಾದರಿಯ ಬರಹಗಳು.

ಸಿನೆಮಾ ಓದುವುದು ಹೇಗೆ ಶಿಬಿರದ ಮೊದಲ ದಿನ ಮೊಗ್ಗಿನ ಮನಸ್ಸು ಚಿತ್ರವನ್ನು ನೋಡಿ ಅದರ ನಿರ್ದೇಶಕರು ಹಾಗೂ ಇನ್ನಿತರ ಪ್ರತಿಷ್ಠಿತರ ಸಮ್ಮುಖದಲ್ಲಿ ನಡುರಾತ್ರಿ ಎರಡವರೆಗೆ ನಡೆಸಿದ ಚರ್ಚೆಯಲ್ಲಿ ಬಹುವಾಗಿ ಹೊಮ್ಮಿದ್ದು ಈ mule ಬಗೆಯ ವಿಮರ್ಶೆಗಳೇ. ಈ ಬಗೆಯದಲ್ಲದ ಇನ್ನೂ ಕೆಲವು ವಿಮರ್ಶೆಯ ಮಾದರಿಗಳು ಕಂಡು ಬಂದವು. ಸಿನಮಾ ಒಂದು ಸಮಾಜೋರಾಜಕೀಯ ಸಿದ್ಧವಸ್ತು (socio political product), ಇಲ್ಲವೇ ಸಿನೆಮಾ ಸಮಾಜವನ್ನು ತಿದ್ದುವ ಮಾಧ್ಯಮ, ಸಿನೆಮಾ ಕಲೆಗಾಗಿ ಕಲೆ (Art for the sake of art) ಎನ್ನುವ ಈಗಾಗಲೇ ಸ್ಥಿರವಾದ ಸಿದ್ಧಾಂತಗಳ ಬಣ್ಣದ ಗಾಜಿನೊಳಗಿಂದ ಸಿನೆಮಾವನ್ನು ಕಂಡು, ತಮ್ಮ ತೀರ್ಮಾನಗಳನ್ನು ಸಿನೆಮಾದ ಮೇಲೆ ಹೇರುವ ಮಾದರಿಯ ವಿಮರ್ಶೆಗಳು. ಇಂತಹ ವಿಮರ್ಶೆ ಓದಿಕೊಂಡ ಬುದ್ಧಿವಂತರು ಮಾಡಬಲ್ಲರು. ಸಿನೆಮಾವೊಂದನ್ನು ನೋಡದೆಯೂ ಸಹ ಇಂತಹ ವಿಮರ್ಶೆಗಳನ್ನು ಹೆಣೆಯಲು ಸಾಧ್ಯವಿದೆ. ಆದರೆ ಇಂತಹ ವಿಮರ್ಶೆಗಳ ಕಂದೀಲು ಹಿಡಿದು ಸಿನೆಮಾ ನೋಡಿದರೆ ನಮಗೆ ಸಿನೆಮಾ ಸ್ಪಷ್ಟವಾಗಿ ಈ ಕಂದೀಲಿನ ಬೆಳಕನ್ನು ಪ್ರತಿಭಟಿಸಿ ಹೊರಗಟ್ಟುವುದು ಅನುಭವಕ್ಕೆ ಬರುತ್ತದೆ.

ಹಾಗಿದ್ದರೆ ನಿಜವಾದ ವಿಮರ್ಶೆ ಯಾವುದು?

ಮೊಗ್ಗಿನ ಮನಸ್ಸು ಕುರಿತು ಮಧ್ಯರಾತ್ರಿ ಎರಡರವರೆಗೆ ನಡೆಸಿದ ಸಂವಾದದ ಮರುದಿನ ಬೆಳಿಗ್ಗೆ ಆ ಸಿನೆಮಾದ ನಿರ್ದೇಶಕ ಶಶಾಂಕ್ ರೊಂದಿಗೆ ನೇರವಾದ ಮಾತುಕತೆಯಿತ್ತು. ಟಿವಿ ಚಾನಲ್ ಗಳ ಕೆಮರಾ ಇಲ್ಲದ, ಆಪ್ತವಾದ ಅನೌಪಚಾರಿಕ ಮಾತುಕತೆಯಾದ್ದರಿಂದ ನಿರ್ದೇಶಕರು ಮನಬಿಚ್ಚಿ ಮಾತನಾಡಿದರು. ಮೊಗ್ಗಿನ ಮನಸ್ಸು ಸಿನೆಮಾವನ್ನು ಅವರು ಗ್ರಹಿಸಿದ ರೀತಿ, ಅವರ ಮನಸ್ಸಿನಲ್ಲಿ ಕತೆಯು ರೂಪು ಗೊಂಡ ಬಗೆ, ಅವರು ಸಿನೆಮಾದಲ್ಲಿ ಬಿಂಬಿಸಲು ಯತ್ನಿಸಿದ ಅಂಶಗಳು ಮೊದಲಾದವುಗಳನ್ನು ತಿಳಿಸಿದಾಗ ನಮಗೆ ಮೊಗ್ಗಿನ ಮನಸ್ಸು ಸಿನೆಮಾವನ್ನು ಶಶಾಂಕ್ ರಿಂದ ಬೇರ್ಪಡಿಸಿ ನೋಡಬೇಕು ಏಕೆ ಎನ್ನುವುದರ ಕುರಿತು ಸೂಚನೆಗಳು ದೊರೆತವು.
ಈ ಮನಸ್ಥಿತಿಯಲ್ಲಿ ಮುಂಗಾರು ಮಳೆ ಸಿನೆಮಾವನ್ನು ನೋಡಿದೆವು. ಸಿನೆಮಾ ನೋಡುತ್ತಿರುವಾಗ ನಡುವೆ ಫ್ರಾನ್ಸಿನವರಾದ, ಪ್ರಸ್ತುತ ಶಿವಮೊಗ್ಗದಲ್ಲಿ ನೆಲೆಸಿರುವ ಡೇವಿಡ್ ಬಾಂಡ್ ಮುಂಗಾರು ಮಳೆಯ ಕುರಿತ ತಮ್ಮ ರೀಡಿಂಗ್ ನೀಡಿದರು. ಮುಂಗಾರು ಮಳೆಯನ್ನು ಒಂದು ಆಕಸ್ಮಿಕವಾದ ಯಶಸ್ವಿ ಸಿನೆಮ ಎಂದು ಕರೆಯಲು ನಿರಾಕರಿಸಿ ಅವರು ದೇವದಾಸ್ ಸಿನೆಮಾದಿಂದ ಶುರುವಾದ ನೈತಿಕ ಹಾಗೂ ಅನೈತಿಕ ಪ್ರೇಮ ಸಂಬಂಧದ ಕಲಾತ್ಮಕ ಸಂವಾದದ ಮುಂದುವರಿಕೆ ಮುಂಗಾರು ಮಳೆ ಎಂದು ನಿರೂಪಿಸಿದರು. ಅವರ ಮಾತುಗಳು ಶಿಬಿರದಲ್ಲಿದ್ದ ಉಳಿದವರಿಗೆ ಹೇಗೆ ಕಂಡಿತೋ ಕಾಣೆ, ನನಗಂತೂ ಅದೂ  ಆ ಸಿನೆಮಾವನ್ನು ನೋಡುವುದಕ್ಕೆ ಹೊಸ ದೃಷ್ಟಿಯನ್ನೇ ಕೊಟ್ಟು ಬಿಟ್ಟಿತು. ಅಲ್ಲಿಯವರೆಗೆ ಮುಚ್ಚಿದ್ದ ಬಾಗಿಲುಗಳನ್ನು ತೆರೆಯುವುದಕ್ಕೆ ಕೀಲಿ ಕೈ ಸಿಕ್ಕಂತಾಗಿ ಬಿಟ್ಟಿತು. ಅಲ್ಲಿಯವರೆಗೆ ಮೂರು ನಾಲ್ಕು ಬಾರಿ ಮುಂಗಾರು ಮಳೆಯನ್ನು ನೋಡಿದ್ದರೂ, ಇನ್ನೇನು ನೋಡುವುದು ಉಳಿದಿದೆ ಎಂಬ ಅಲಕ್ಷ್ಯವಿದ್ದರೂ ಅವೆಲ್ಲವನ್ನೂ ಬದಿಗಿಟ್ಟು ಬಿಟ್ಟ ಕಣ್ಣು ಬಿಟ್ಟಂತೆ, ಅಕ್ಕ ಪಕ್ಕದವರೊಂದಿಗೆ ಮಾತೂ ಆಡದಂತೆ, ಹಾಸ್ಯದ ಸನ್ನಿವೇಶಗಳಲ್ಲಿ ನಗಲಿಕ್ಕೂ ಆಗದೆ, ದುಃಖದ ಸನ್ನಿವೇಶಗಳಲ್ಲಿ ಅಳಲೂ ಆಗದೆ ಸಿನೆಮ ನೋಡಿದೆ.

ಮುಂಗಾರು ಮಳೆ ನೋಡಿದ ತರುವಾಯ ರಾತ್ರಿ ಎಲ್ಲರೂ ದೊಡ್ಡ ಪ್ರಮಾಣದ ನಿರೀಕ್ಷೆ ಕುತೂಹಲಗಳಿಂದ ತುಂಬಿದ್ದರು. ಆಗಷ್ಟೇ ಮಠ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್ ಶಿಬಿರಕ್ಕೆ ದರ್ಶನ ಕೊಟ್ಟು, ಪುಸ್ತಕ ಮಾರಿ, ಫೋಟೊ ತೆಗೆಸಿಕೊಂಡು, ಮನರಂಜಿಸಿ ಹೋಗಿದ್ದರು. ಮರುದಿನ ಬೆಳಿಗ್ಗೆ ಯೋಗರಾಜ್ ಭಟ್ಟರು ಬರುವವರಿದ್ದಾರೆ ಎಂಬ ಸುದ್ದಿ ಹರಡಿತ್ತು. ಹೀಗಾಗಿ ಬೆಳಗಾಗುವುದನ್ನು ಕಾಯುತ್ತ ಶಿಬಿರಾರ್ಥಿಗಳು ಮಲಗಿದ್ದರು.
ಬೆಳಿಗ್ಗೆ ತಿಂಡಿ ತಿನ್ನುವಾಗ ಭಟ್ಟರು ಬರುವುದಿಲ್ಲ ಎಂಬ ವಾರ್ತೆ ತಲುಪಿತು. ಮುಂಗಾರು ಮಳೆಯ ಕುರಿತು ವಿಮರ್ಶೆಗಳನ್ನು ಮಾಡುವುದಕ್ಕೆ ಐದೈದು ಮಂದಿಯ ತಂಡಗಳನ್ನು ಮಾಡಲಾಯ್ತು. ಮೊಗ್ಗಿನ ಮನಸ್ಸು ಸಿನೆಮಾ ನೋಡಿದಾಗ ನಡೆಸಿದಂತೆಯೇ ತಂಡದಲ್ಲಿ ಚರ್ಚಿಸಿ ಆ ತಂಡದ ವಿಮರ್ಶೆಯನ್ನು ಒಬ್ಬರು ಮಂಡಿಸಬೇಕಿತ್ತು. ಆದರೆ ಈಗ ಇದ್ದ ಒಂದೇ ವ್ಯತ್ಯಾಸವೆಂದರೆ ವಿಮರ್ಶೆಯನ್ನು ಮಂಡಿಸುವಾಗ ಸಿನೆಮಾದ ನಿರ್ದೇಶಕರಾಗಲಿ, ಸಿನೆಮಾಗೆ ಸಂಬಂಧ ಪಟ್ಟವರಾಗಲಿ ಅಲ್ಲಿ ಇರದಿದ್ದದ್ದು.

ಹಿಂದಿನ ರಾತ್ರಿಯ ವಿಮರ್ಶೆಗಳಿಗೆ ಹೋಲಿಸಿದರೆ ಮುಂಗಾರು ಮಳೆ ವಿಮರ್ಶೆಗಳು ಒಂದು ಫೋಕಸ್ ಹೊಂದಿದ್ದವು. ಯಾವ ಅಂಶಗಳು ವಿಮರ್ಶೆಯ ಹೆಸರಿನಲ್ಲಿ ಮಂಡಿಸಲ್ಪಡಬಾರದು ಎನ್ನುವ ಸ್ಪಷ್ಟತೆ ಸಿಕ್ಕಿತ್ತು. ನಾಯಕ, ನಾಯಕಿಯರ ನಟನೆ, ಮನೋ ಮೂರ್ತಿ ಸಂಗೀತ, ಕಾಯ್ಕಿಣಿ ಸಾಹಿತ್ಯ ಇವೆಲ್ಲವುಗಳನ್ನು ದಾಟಿಕೊಂಡು ಬಹುತೇಕರು ಮುಂದೆ ಹೋಗಿದ್ದ ಕುರಿತು ನಿಚ್ಚಳವಾದ ಸೂಚನೆಗಳು ಕಂಡುಬಂದವು. ಹಿಂದಿನ ಪ್ರಯತ್ನಕ್ಕೆ ಹೋಲಿಸಿದರೆ ಬಹುದೊಡ್ಡ ಜಂಪ್ ಮಾಡಿಯಾಗಿತ್ತು.

ಆದರೆ ಪಾತ್ರಗಳು ಒಳ್ಳೆಯವು ಕೆಟ್ಟವು, ನಿರ್ದೇಶಕ ಏನಂದುಕೊಂಡಿದ್ದಿರಬಹುದು ಮೊದಲಾದ ಸಮಸ್ಯೆಗಳನ್ನಿಟ್ಟುಕೊಂಡು ವಿಮರ್ಶೆ ಹಲವು ಸಲ ದಾರಿ ತಪ್ಪಿತು. ಮರಗಳಿಗಾಗಿ ಕಾಡನ್ನು ಮರೆತಂತೆ ದಿಕ್ಕುತಪ್ಪಿದ ಸಂದರ್ಭಗಳೂ ಇದ್ದವು. ಇವೆಲ್ಲಾ ದೋಷಗಳನ್ನು ಗಮನದಲ್ಲಿಟ್ಟುಕೊಂಡರೂ ಸಿನೆಮಾವನ್ನು ನೋಡುವ, ಗ್ರಹಿಸುವ ರೀತಿಯಲ್ಲಿ ಕ್ರಾಂತಿಕಾರಕವಾದ ಬದಲಾವಣೆ ಅವಶ್ಯವಾಗಿಯೂ ಆಗಿಹೋಗಿತ್ತು, ಹಿಂದಿರುಗಿ ಹೋಗಲಾಗದಂತಹ ಹಂತವನ್ನು ಶಿಬಿರದಲ್ಲಿ ಭಾಗವಹಿಸಿದ್ದರಲ್ಲಿ ಕೆಲವರಾದರೂ ತಲುಪಿಕೊಂಡಿದ್ದರು.

ನಮ್ಮ ಗ್ರಹಿಕೆ, ದೃಷ್ಟಿಕೋನ, ಮನಸ್ಥಿತಿಗಳನ್ನು ಆಮೂಲಾಗ್ರವಾಗಿ ಬದಲಾಯಿಸಿಕೊಳ್ಳಬೇಕು ಎಂದು ಅಪೇಕ್ಷಿಸುವ ಸಿನೆಮಾ ಓದನ್ನು ಮೂರು ದಿನಗಳ ಒಂದು ಶಿಬಿರ ಕಲಿಸಿಬಿಡಬೇಕು ಎಂದು ನಿರೀಕ್ಷಿಸುವುದು ಮೂರ್ಖತನ. ಇಡೀ ಜೀವಮಾನ ಶ್ರದ್ಧೆಯಿಂದ ಪ್ರಯತ್ನಿಸಿದರೂ ಲಭಿಸದ ಆ ಪಕ್ವತೆಯನ್ನು ದುಡ್ಡು ಕೊಟ್ಟು ಪಡೆಯಲು, ಪಾಠ ಕೇಳಿ ಸಿದ್ಧಿಸಿಕೊಳ್ಳಲು ಸಾಧ್ಯ ಎನ್ನುವ ನಂಬಿಕೆಯೂ ಪೆದ್ದುತನದಿಂದ ಹುಟ್ಟುವುದು.

September 29, 2010

ನಮ್ಮ ಸಿನೆಮಾಗಳಲ್ಲಿ ಕೋರ್ಟ್ ರೂಂ ಡ್ರಾಮಾಗಳೇಕಿಲ್ಲ?

ಸಂವಾದ.ಕಾಮ್‍ನ ಶೇಖರ್ ಪೂರ್ಣರನ್ನು ಹಿಂದಿನ ಬಾರಿ ಭೇಟಿಯಾಗಿ ಮಾತನಾಡುವಾಗ ಅವರು ಭಾರತೀಯ ಚಿತ್ರರಂಗದಲ್ಲಿನ ಒಂದು ಕುತೂಹಲಕಾರಿ ಅಂಶದ ಬಗ್ಗೆ ನಮ್ಮ ಗಮನ ಸೆಳೆದರು.

ಭಾರತೀಯ ಚಿತ್ರಗಳಲ್ಲಿ ಕೋರ್ಟ್ ರೂಮ್ ಡ್ರಾಮಾಗಳು ಏಕಿಲ್ಲ ಎಂಬುದು ಅವರ ಪ್ರಶ್ನೆಯಾಗಿತ್ತು. ಅನೇಕ ಚಿತ್ರಗಳಲ್ಲಿ ಕತೆಯ ಸಂದರ್ಭಕ್ಕೆ ಅನುಗುಣವಾಗಿ ಕೋರ್ಟ್ ಸನ್ನಿವೇಶಗಳು ಬಂದು ಹೋಗುತ್ತವೆಯೇ ಹೊರತು ಕೋರ್ಟಿನಲ್ಲೇ ನಡೆಯುವ ವಿದ್ಯಮಾನಗಳನ್ನು ಆಧರಿಸಿ ಚಿತ್ರಗಳು ಮೂಡಿ ಬಂದಿಲ್ಲ. ಬಹುಮುಖ್ಯವಾಗಿ ನಮಗೆ ನ್ಯಾಯಾಲಯ ಸಿನೆಮಾಗಳಲ್ಲಿ ಕಂಡು ಬರುವುದು ನಾಯಕ ನಾಯಕಿಗೆ ಡಿವೋರ್ಸ್ ಕೊಡಿಸುವ ಸಂದರ್ಭದಲ್ಲಿ ಇಲ್ಲವೇ ಬೇಲಿಯೇ ಹೊಲವನ್ನು ಮೇಯ್ದಂತೆ ವ್ಯವಸ್ಥೆಯ ರಕ್ಷಕರೇ ಭಕ್ಷಕರಾದಾಗ ನಾಯಕನು ಅಧಿಕಾರ ಕೈಗೆ ತೆಗೆದುಕೊಂಡದ್ದನ್ನು ಸಮರ್ಥಿಸಿಕೊಳ್ಳುವ ಸಂದರ್ಭಗಳಲ್ಲಿ. ಇಲ್ಲೆಲ್ಲಾ ನ್ಯಾಯಾಲಯ, ನ್ಯಾಯಾಧೀಶ, ವಕೀಲರು, ಮೊಕದ್ದಮೆ, ವಾದ-ವಿವಾದಗಳು – ಎನ್ನುವುದು ಸಾಂದರ್ಭಿಕವಾಗಿ ಬಳಕೆಯಾಗುತ್ತವೆಯಷ್ಟೇ. ಆದರೆ ಇಡೀ ಸಿನೆಮಾದ ಪ್ರಧಾನ ಕತೆಯಾಗಿ ನ್ಯಾಯಾಲಯವನ್ನು ಬಳಸಿಕೊಳ್ಳಲಾಗಿಲ್ಲ.court

ಹಾಲಿವುಡ್ ನಲ್ಲಿ ಕೋರ್ಟ್ ರೂಂ ಡ್ರಾಮಾಗಳ ದೊಡ್ಡ ಪರಂಪರೆಯೇ ಇದೆ. ಸಿಡ್ನಿ ಲ್ಯುಮೆಟ್ ನಿರ್ದೇಶನದ Twelve Angry men ನಿಂದ ಹಿಡಿದು ಜಾನ್ ಗಿಶಂ ಕಾದಂಬರಿಗಳನ್ನು ಆಧರಿಸಿದ ಅನೇಕ ಸಿನೆಮಾಗಳು ನ್ಯಾಯಾಲಯದಲ್ಲಿನ ಬದುಕನ್ನು ಮುಟ್ಟುವ ಪ್ರಯತ್ನ ಮಾಡಿವೆ. ಭಾರತದ ಸಂದರ್ಭದಲ್ಲಿ ಈ ಪ್ರಯತ್ನ ಗೋವಿಂದ ನಿಹಿಲಾನಿಯವರ ಆಕ್ರೋಶ್ ಚಿತ್ರವನ್ನು ಹೊರತು ಪಡಿಸಿದರೆ ಮತ್ಯಾವುದೇ ಚಿತ್ರಗಳಲ್ಲಿ ಕಂಡು ಬಂದಿಲ್ಲ. ಚಲನಚಿತ್ರಗಳಷ್ಟೇ ಅಲ್ಲ. ನಾಟಕಗಳಲ್ಲಿಯೂ ಸಹ ಕಾನೂನು, ನ್ಯಾಯಾಲಯ, ದಾವೆಗಳು ತುಂಬಿರುವ ಬದುಕನ್ನು ಕಾಣಲು ಸಾಧ್ಯವಿಲ್ಲ. ‘ನಾನ್ ಅವನಿಲ್ಲೈ’ ಚಿತ್ರದ ರಿಮೇಕ್ ಆದ ‘ಬುದ್ಧಿವಂತ’ದಲ್ಲಿ ಇಡೀ ಚಿತ್ರ ಕೊರ್ಟಿನಲ್ಲೇ ನಡೆದಂತಿದ್ದರೂ ಅಲ್ಲಿ ಪ್ರಮುಖವಾಗುವುದು ಕೋರ್ಟ್ ಅಲ್ಲ.

ಯಾಕೆ ಹೀಗೆ? ಕಾನೂನು, ನ್ಯಾಯ, ದಾವೆ, ವಕೀಲಿಕೆ, ಸತ್ಯ, ನೀತಿ ಮೊದಲಾದವುಗಳ ಕುರಿತು ಒಂದು ಸಮಾಜವಾಗಿ ನಮ್ಮ ಸೃಜನಶೀಲ ಅಥವಾ ಕಲಾತ್ಮಕ ಪ್ರತಿಕ್ರಿಯೆ ಏನೂ ಇಲ್ಲವೇ?

ಈ ಕುರಿತು ಹೆಚ್ಚಿನ ಚರ್ಚೆಯನ್ನು ಹುಟ್ಟಿಹಾಕಲು ಶೇಖರ್ ಪೂರ್ಣ ಸೂಚನೆ ನೀಡಿದ್ದರು. ದಕ್ಷಿಣ ಏಷ್ಯಾ ಅದರಲ್ಲೂ ಮುಖ್ಯವಾಗಿ ಭಾರತದ ಸಿನೆಮಾ, ನಾಟಕಗಳು ಕೋರ್ಟ್ ರೂಮ್ ಡ್ರಾಮಾವನ್ನು ಮುಟ್ಟದಿರುವುದಕ್ಕೆ ಕಾರಣಗಳು, ಅಂತಹ ಪ್ರಯತ್ನಗಳು ಯಾವುದೇ ಭಾಷೆಯ ಚಿತ್ರಗಳಲ್ಲಿ ಆಗಿದೆಯೆನ್ನುವುದಾದರೆ ಅವುಗಳ ಕುರಿತ ಮಾಹಿತಿಯನ್ನು ದಯವಿಟ್ಟು ಇಲ್ಲಿ ಹಂಚಿಕೊಳ್ಳಿ.

September 4, 2010

ಪಂಚರಂಗಿ: ಸಮಕಾಲೀನ ಬದುಕಿಗೆ ಬರೆದ ಭಾಷ್ಯ

ಮುಂಗಾರು ಮಳೆಯಲ್ಲಿ ಬೇಜವಾಬ್ದಾರಿಯ ಪುಂಡ ಹುಡುಗನಿಗೆ ಪ್ರೀತಿಯ ಗುಂಡಿಯಲ್ಲಿ ಧುಮುಕಿ ಮನೆತನದ ಗೌರವ ಉಳಿಸುವಷ್ಟು ಜವಾಬ್ದಾರಿ ಹೊರಿಸಿ, ಗಾಳಿಪಟದಲ್ಲಿ ಪ್ರೀತಿಯಲ್ಲಿ ಬಿದ್ದ ನಾಯಕನನ್ನು ಕವಿಯಾಗಿಸಿ, ಮನಸಾರೆಯಲ್ಲಿ ಹುಚ್ಚು – ಎಚ್ಚರದ ಹಗ್ಗ ಜಗ್ಗಾಟಕ್ಕೆ ಪಾತ್ರಗಳನ್ನು ನಿಲ್ಲಿಸಿದ್ದ ಯೋಗರಾಜ್ ಭಟ್ಟರು ‘ಪಂಚರಂಗಿ’ಯಲ್ಲಿ ನಾಲ್ಕು ಹೆಜ್ಜೆ ಮುಂದಕ್ಕೆ ಹೋಗಿ ನಾಯಕ ನಾಯಕಿಯರ ಮೂಲಕ ಸಮಕಾಲೀನ ಬದುಕಿಗೆ ಭಾಷ್ಯ ಬರೆಸಿಬಿಟ್ಟಿದ್ದಾರೆ.

ಸಿನೆಮಾ ಎನ್ನುವುದು ನಿರ್ದೇಶಕನ ಮಾಧ್ಯಮ ಎನ್ನುವುದನ್ನು ಈ ದಿನಗಳಲ್ಲಿ ಪರಿಣಾಮಕಾರಿಯಾಗಿ ನಿರೂಪಿಸುತ್ತಿರುವ ಕೆಲವೇ ಕೆಲವು ನಿರ್ದೇಶಕರಲ್ಲಿ ಒಬ್ಬರಾದ ಯೋಗರಾಜ್ ಭಟ್ಟರ ಸಿನೆಮಾಗಳು, ಟಿವಿ ಕಾರ್ಯಕ್ರಮಗಳಲ್ಲಿ, ಸಂದರ್ಶನಗಳಲ್ಲಿ ದಿಕ್ಕು ತಪ್ಪಿಸುವ, ಮೋಸಮಾಡುವ ಅವರ ನಯವಾದ ಮಾತುಗಳಿದ್ದಂತೆಯೇ. ಡೈಲಾಗಿನ ಪ್ರತಿ ಸಾಲುಗಳಲ್ಲಿ ಎದ್ದೆದ್ದು ಹೊಡೆಯುವ ಪಂಚುಗಳ ಹೊಡೆತದಿಂದ ಪ್ರೇಕ್ಷಕ ಬಚಾವಾಗಲಿಕ್ಕೆ ಸಾಧ್ಯವೇ ಇಲ್ಲ. ಇಷ್ಟನ್ನು ನೋಡು ಎಂದು ಭಟ್ಟರು ಮಾಡುವ ಕಣ್ಕಟ್ಟನ್ನು ಮೈಮರೆತು ನೋಡುವುದರಲ್ಲೇ ನೋಡುಗನಿಗೆ ಸದ್ಗತಿ ದೊರಕಿಬಿಟ್ಟಿರುತ್ತದೆ. ಪಂಚಿಂಗ್ ಡೈಲಾಗುಗಳು, ಪಿಂಚಿಂಗ್ ಎಮೋಷನ್ನುಗಳ ನಡುವೆ ಹೊಂಚಿಕೊಂಡು ಎಚ್ಚರವನ್ನು ಕಾಯ್ದಿಟ್ಟುಕೊಂಡ ಬುದ್ಧಿವಂತನಿಗೂ ದಿಕ್ಕೆಡಿಸುವ ನಿರೂಪಣಾ ಶೈಲಿ… ಇವು ಭಟ್ಟರ ಸಿನೆಮಾ ಗುಣಲಕ್ಷಣಗಳು.

ಉಳಿದ ಸಿನೆಮಾಗಳಂತೆ ಪಂಚರಂಗಿಯದು ಸಾಂಪ್ರದಾಯಿಕ ಶೈಲಿಯ ಕಥೆಯಲ್ಲ. ರಾಮಾಯಣ, ಹರಿಕತೆ, ಬೇತಾಳ, ಕಾಗಕ್ಕ ಗುಬ್ಬಕ್ಕ ಕಥೆಗಳನ್ನು ಕೇಳಿ ಬೆಳೆದವರಿಗೆ, ಸಾಹಿತ್ಯ ತುಂಬಿಕೊಂಡು ತಲೆ ಕೆಡಿಸಿಕೊಂಡವರಿಗೆ ಭಟ್ಟರ ಯಾವುದೇ ಸಿನೆಮಾಗಳಲ್ಲಿ ಕೈಯಲ್ಲಿ ಹಿಡಿದು ತಿರುವು ಮುರುವು ಮಾಡಿ ನೋಡಬಹುದಾದ ಕತೆ ಸಿಕ್ಕುವುದಿಲ್ಲ. ಅವರ ಸಿನೆಮಾಗಳಲ್ಲಿರುವುದು ಘಟನೆಗಳು ಮಾತ್ರ. ಪಾತ್ರಗಳು ತಾವಿದ್ದ ಊರು, ಮನೆ, ಕೆಲಸ ಕಾರ್ಯಗಳನ್ನು ಬಿಟ್ಟು ನಿರ್ದೇಶಕನೆಂಬ ದೈವವು ಸೂಚಿಸಿದ ಜಾಗಕ್ಕೆ ಬಂದು ಸಿಕ್ಕಿ ಹಾಕಿಕೊಳ್ಳುತ್ತವೆ. ಅಲ್ಲಿ ನಡೆಯುವ ಚಕಮಕಿಯೇ ಸಿನೆಮಾ ಆಗಿರುತ್ತದೆ.

ನೆನಪಿಸಿಕೊಳ್ಳಿ, ಮುಂಗಾರು ಮಳೆಯಲ್ಲಿ ಮದುವೆಗೆ ಏಳು ದಿನಗಳಿವೆ ಎಂದಾಗ ಮದುಮಗಳ ಮನೆಗೆ ನಾಯಕನ ಆಗಮನವಾಗುತ್ತದೆ. ಬೆಂಗಳೂರಿನ ಬದುಕಿಗೆ ಬೇಸತ್ತು ಗಾಳಿಪಟದ ನಾಯಕರು ರಾತ್ರೋ ರಾತ್ರಿ ಊರು ಬಿಡುತ್ತಾರೆ. ಹುಚ್ಚು ಕನಸುಗಳನ್ನು, ವಿಚಾರಗಳನ್ನು ಹೊತ್ತ ಮನಸಾರೆಯ ನಾಯಕ ಹುಚ್ಚಾಸ್ಪತ್ರೆಯಲ್ಲಿ ಸಿಕ್ಕಿಹಾಕಿಕೊಳ್ಳುತ್ತಾನೆ. ಪಂಚರಂಗಿಯಲ್ಲೂ ಅಷ್ಟೇ.ಈ ಸಿನೆಮಾದ ನಾಯಕ ಗೊಂಬೆಗಳಿಗೆ, ಗೊಂಬೆಗಳಂತಹ ಹೆಣ್ಣು ಮಕ್ಕಳಿಗೆ ಸೀರೆ ಉಡಿಸಿ ಅದರಿಂದ ಬಂದ ದುಡ್ಡಿನಲ್ಲಿ ಕನ್ನಡದಲ್ಲಿ ಎಂ.ಎ ಓದುತ್ತಿರುತ್ತಾನೆ.ಓದಿಸುವುದಕ್ಕೆ ಅಪ್ಪ ಇಲ್ಲವೇ ಎಂದು ಕೇಳಬೇಡಿ… ದೊಡ್ಡ ಮಗ ಸಾಫ್ಟ್ ವೇರ್ ಬಾಲ ಹಿಡಿದು ಅಮೇರಿಕಾಗೆ ಹೋದ ಮೇಲೆ ರಿಟೈರ್ ಆದ ಅಪ್ಪ ಕನ್ನಡ ಮೀಡಿಯಂನಲ್ಲಿ ಓದುತ್ತೇನೆನ್ನುವ ಮಗನನ್ನು ಓದಿಸುವ ಜವಾಬ್ದಾರಿಯಿಂದಲೇ ರಿಟೈರ್ ಆಗಿರುತ್ತಾನೆ. ‘ಪಂಚರಂಗಿ ಹೂವುಗಳು, ಒಂಚೂರ್ ನೀವು ನಾವುಗಳು’ ಎಂದು ನೋಡಿದ್ದಕ್ಕೆ, ಕೇಳಿದ್ದಕ್ಕೆ, ತೋಚಿದ್ದಕ್ಕೆಲ್ಲ ‘ಗಳು’ ಸೇರಿಸಿಕೊಂಡು ಡೈಲಾಗ್ ಹೊಡೆಯುತ್ತ ಓಡಾಡುವ ನಾಯಕನಿಗೆ ನಾರ್ಕೋಲೆಪ್ಸಿ. ಅಂದರೆ ಇದ್ದಕ್ಕಿದ್ದ ಹಾಗೆ ಕಂಡ ಕಂಡಲ್ಲಿ ಮರದ ಕೊರಡಿನಂತೆ ಮಲಗಿ ಬಿಡುವ ರೋಗ. ಜೊತೆಗೆ ತನ್ನದೇ ಡೈಲಾಗುಗಳಿಗೆ ಹಿನ್ನೆಲೆಯಲ್ಲಿ ಭಟ್ಟರ ‘ಹೌದು ಬಿಡಪ್ಪ’ ಎನ್ನುವ ಪ್ರತಿಧ್ವನಿ ಕೇಳುವ ಅರುಳು ಮರುಳು.

pnchrngi ಈ ನಮ್ಮ ನಾಯಕನ ಕಣ್ಣಿನಲ್ಲಿ ಕಿಡಿ ಗುರುತಿಸಿದ ಕಲ್ಚರಲ್ ಕೊಆರ್ಡಿನೇಟರ್ ಜಯಂತ್ ಕಾಯ್ಕಿಣಿಯವರು ತಮ್ಮ ಮಾತು ಹೊಸ ಜನರೇಷನ್ನಿನ ನಾಯಕನಿಗೆ ರೇಜಿಗೆ ತರಬಹುದೆಂದು ತಾವೇ ಭಾವಿಸುತ್ತಾರೆ. ನಿದ್ದೆಯಲ್ಲಿ ಹಾಡಿಕೊಂಡು ಹಾಡಿನಲ್ಲಿ ನಿದ್ದೆ ಮಾಡಿಕೊಂಡಿದ್ದ ನಾಯಕ ತನ್ನ ಅಣ್ಣನಿಗೆ ಹೆಣ್ಣು ನೋಡುವುದಕ್ಕೆಂದು ಅಪ್ಪ, ಅಮ್ಮ, ಅಮ್ಮ ಮುದ್ದಿನಿಂದ ತಲೆ ಬಾಚಿ ಕುಂಕುಮ ಇಡುವ ನಾಯಿಯೊಂದಿಗೆ ಸಮುದ್ರದ ದಡದಲ್ಲಿರುವ ಊರಿಗೆ ಹೋಗುತ್ತಾನೆ.

ಅತ್ತ ಆ ಮನೆಯಲ್ಲಿ ಸದಾ ಎಲೆ ಅಡಿಕೆ ಬಾಯಲ್ಲಿ ತುಂಬಿಕೊಂಡ, ಕಾಫಿಗಾಗಿ ಹಪಹಪಿಸುವ ಮನೆ ಯಜಮಾನ ಆತನ ಹೆಂಡತಿ, ಇಬ್ಬರು ಹೆಣ್ಣು ಮಕ್ಕಳು. ಅದರಲ್ಲಿ ನಮ್ಮ ನಾಯಕನ ಅಣ್ಣ ನೋಡಲು ಬಂದ ಹುಡುಗಿ ಒಬ್ಬಳು ಮತ್ತೊಬ್ಬಳು ತಂದೆ ತಾಯಿ ತೀರಿ ಹೋದ, ಚಿಕ್ಕಮ್ಮನ ಮಗಳಾಗಿ ಬೆಳೆದ ಹುಡುಗಿ.

ಮಧ್ಯಂತರ ದಾಟಿ ಅರ್ಧ ತಾಸು ಕಳೆಯುವವರೆಗೂ ಸಿನೆಮಾದಲ್ಲಿ ನಾವು ಗುರುತಿಸಬಹುದಾದದ್ದೇನೂ ನಡೆಯುವುದಿಲ್ಲ. ನಮ್ಮ ಉಳಿದ ಸಿನೆಮಾಗಳಲ್ಲಿ ಇಷ್ಟು ಹೊತ್ತಿಗಾಗಲೆ ನಾಲ್ಕಾರು ಫ್ಲ್ಯಾಶ್ ಬ್ಯಾಕುಗಳು, ಐದಾರು ಫೈಟುಗಳು ನಡೆದು, ಮೂರ್ನಾಲ್ಕು ಹೆಣಗಳು ಉರುಳಿ, ಎರಡು ಮೂರು ತಲೆಮಾರುಗಳಲ್ಲಿ ಜೀವಿಸಿದ್ದ ಒಬ್ಬನೇ ನಾಯಕನ ಡಬಲ್, ತ್ರಿಬಲ್ ರೋಲುಗಳು ಬಂದು ಹೋಗಿರುತ್ತವೆ. ಚಂದಮಾಮ ಕತೆ ಕೇಳಿ ಬೆಳೆದ ಮಂದಿಗೆ ಮುಕ್ಕಾಲು ಭಾಗ ಸಿನೆಮಾದುದ್ದಕ್ಕೂ ಕಥೆ ಕೊಂಚವೂ ಕದಲದೆ ನಿಂತಿರುವುದು, ಈಗ ಅಥವಾ ಇನ್ನೆರೆಡು ಘಳಿಗೆಯಲ್ಲಿ ಕದಲಬಹುದು ಎನ್ನುವ ಕುತೂಹಲವನ್ನು ಕಾಪಿಟ್ಟುಕೊಂಡೇ ಮುನ್ನಡೆಯುವುದು ಅಚ್ಚರಿ ಮೂಡಿಸುತ್ತದೆ. ಕಥೆಯ ಎಳೆಯೇ ಕೈಗೆ ಸಿಕ್ಕಿರುವುದಿಲ್ಲವಾದ್ದರಿಂದ ತೂರಿಕೊಂಡು ಬರುವ ಹಾಡುಗಳು ಲಹರಿಯನ್ನು ಕತ್ತರಿಸಿದ ಅಪವಾದಕ್ಕೆ ತುತ್ತಾಗುವುದಿಲ್ಲ.

ಸಿನೆಮಾದಲ್ಲಿ ಘಟನೆಯೊಂದು ಪಕ್ಕದಲ್ಲಿ ನಡೆದಂತೆ ತೆರೆದುಕೊಳ್ಳುತ್ತಾ ಹೋದರೂ ನಾವು ನೀವು ಕೇಳಿ ಬೆಳೆದ ಕತೆಗಳ ಧಾಟಿಯಲ್ಲಿಯೇ ಸಿನೆಮಾ ಬಗ್ಗೆ ಹೇಳುತ್ತೇನೆ ಕೇಳಿ. ಹೆಣ್ಣು ನೋಡಲಿಕ್ಕೆಂದು ಈ ಮೊದಲು ಹೇಳಿದ ಮನೆಯವರು ಈ ಮೊದಲು ಹೇಳಿದ ಮನೆಗೆ ಬಂದಿರುತ್ತಾರೆ. ಹೆಣ್ಣಿನ ಮನೆಯಲ್ಲಿ ಕೆಲಸದ ಹೆಣ್ಣಿನ ಹಿಂದೆ ಬೀಳುವ ಗಂಡಿನ ಮನೆಯವರನ್ನು ಕರೆತಂದ ಬಸ್ಸಿನ ಡ್ರೈವರು. ತನಗಿಂತ ಹೆಚ್ಚು ಓದಿದ, ನೋಡಲು ಸುಂದರವಾಗಿಯೇ ಇರುವ ತಂಗಿ ಎಲ್ಲಿ ತನ್ನ ನೋಡ ಬಂದವನಿಗೆ ಮಂಕು ಬೂದಿ ಎರಚುವಳೋ ಎಂದು ನೋಡುವ ಶಾಸ್ತ್ರಕ್ಕೆ ತಯಾರಾಗುವ ಹುಡುಗಿ. ಎಂಬತ್ತು ಹುಡುಗರ ಅಪ್ಲಿಕೇಶನ್ನುಗಳನ್ನು ರಿಜೆಕ್ಟ್ ಮಾಡಿ ಅಕ್ಕನೊಂದಿಗೆ ಜಗಳವಾಡಿ ತೆಂಗಿನ ಮರ ಏರಿ ಕೂರುವ ನಾಯಕಿ. ಮನೆಯ ವಾಸ್ತುವನ್ನೆಲ್ಲಾ ನೋಡಿ ಮನೆಯವರ ಮುಖ ನೋಡುವ ನಾಯಕನ ಸೋದರ ಮಾವ. ತಲೆ ನೋವು ನಿವಾರಣೆಗಾಗಿ ಕುತ್ತಿಗೆ ಮಟ್ಟಕ್ಕೆ ಮರಳಿನಲ್ಲಿ ಹೂತು ಕೂತ ಅನಂತ್ ನಾಗ್. ಇವಿಷ್ಟೂ ಸಿನೆಮಾದ ಪಾತ್ರಗಳು.

ರಿವೀವ್ ಮುಕ್ಕಾಲು ಪಾಲು ಮುಗಿಯುತ್ತ ಬಂದರೂ ಕಥೆ ತಿಳಿಸಲೇ ಇಲ್ಲ ಅಲ್ಲವೇ? ‘ಪಂಚರಂಗಿ’ ಸ್ಟ್ರಕ್ಚರ್ ಇರುವುದೂ ಹೀಗೆಯೇ… ಹೆಣ್ಣು ನೋಡಲು ಬಂದ ಸಾಫ್ಟ್ ವೇರ್ ಗಂಡಿಗೆ ಬೇರೊಬ್ಬ ಹುಡುಗಿಯ ಮೇಲೆ ಮನಸ್ಸಿರುತ್ತದೆ. ಹೆಣ್ಣಿನ ಮನೆಯಲ್ಲಿ ಕೂತು ತಿರುಪತಿಯಲ್ಲಿದ್ದೇನೆ ಎಂದು ಆತ ಮೆಸೇಜು ಹಾಕುತ್ತಿದ್ದರೆ ಆ ಹುಡುಗಿ ಅವನ ಬೆನ್ನಟ್ಟಿ ಆತ ಇದ್ದಲ್ಲಿಗೇ ಬಂದು ಬಿಟ್ಟಿರುತ್ತಾಳೆ. ಇತ್ತ ಹುಡುಗನ ಒಪ್ಪಿಗೆಯನ್ನೂ ಕೇಳದೆ ಹುಡುಗನ ತಾಯ್ತಂದೆ, ಹುಡುಗಿಯ ತಾಯ್ತಂದೆ ಮರುದಿನವೇ ನಿಶ್ಚಿತಾರ್ಥವನ್ನೂ ಇಟ್ಟುಕೊಂಡು ಬಿಡುತ್ತಾರೆ. ಹೀಗಿರುವಾಗ ನಮ್ಮ ನಾಯಕನಿಗೆ ಅಣ್ಣ ಬೇರೊಂದು ಹುಡುಗಿಯನ್ನು ಮೆಚ್ಚಿರುವುದು ತಿಳಿಯುತ್ತದೆ. ರಾತ್ರೋರಾತ್ರಿ ಸೆಕ್ಸ್ ಸ್ಕ್ಯಾಂಡಲಿನಲ್ಲಿ ವಾಸ್ತು ಜ್ಯೋತಿಷಿ ಅರೆಸ್ಟ್ ಆಗಿರುತ್ತಾನೆ.

ಮೇಲ್ನೋಟಕ್ಕೆ ಪಡ್ಡೆಗಳನ್ನು ರಂಜಿಸುವ ಡೈಲಾಗುಗಳು, ಎಲ್ಲರ ಕುತೂಹಲ ಕೆರಳಿಸಿದ ಹಾಡುಗಳಿಂದ ಪಂಚರಂಗಿ ಅದ್ಭುತ ಮನರಂಜನೆಯ ಸಿನೆಮಾ ಆಗಿ ಕಂಡರೂ ಒಳಪದರಗಳಲ್ಲಿ ಇಂದಿನ ಸಮಾಜದ ಬಗೆಗೆ, ‘ಕವಲು’ ಮಾದರಿಯ ಕುಟುಂಬ ವ್ಯವಸ್ಥೆಯ ಜಿಜ್ಞಾಸೆಯ ಕುರಿತು ತೀರ ಶಾರ್ಪ್ ಆದ ಒಳ ನೋಟಗಳನ್ನು ಹೊಂದಿದೆ. ಇಲ್ಲಿ ಮೂರು ಜೋಡಿಗಳು ತಮ್ಮ ಸಂಗಾತಿಯನ್ನು ಆಯ್ದುಕೊಳ್ಳುವ, ಒಲಿಸಿಕೊಳ್ಳುವ ಕಥೆಯಿದೆ.ಅಷ್ಟು ದೂರದ ಬೆಂಗಳೂರಿನಿಂದ ಹುಡುಗಿಯ ನೋಡಲೆಂದೇ ಬಂದ ಸಾಫ್ಟ್ ವೇರ್ ಹುಡುಗ ಆತನ ತಂದೆ ತಾಯಿ. ಬಸ್ಸಿನ ಡ್ರೈವರ್ ಹಾಗೂ ಆತನ ಕುರುಡು ತಂದೆ. ನಮ್ಮ ನಾಯಕ ನಾಯಕಿ.

ಒಳಗೊಂದು ಹೊರಗೊಂದು ಎಂದು ಒಬ್ಬರನ್ನೊಬ್ಬರು ಬೈದುಕೊಳ್ಳುವ ಬೀಗರಿಬ್ಬರ ಮನೆಯವರ ಸಂಸ್ಕೃತಿ, ಸಂಪ್ರದಾಯ, ಮರ್ಯಾದೆ, ವಾಸ್ತು, ಶಾಸ್ತ್ರ ಮೊದಲಾದವುಗಳನ್ನು ಗೇಲಿ ಮಾಡುವ ನಾಯಕ ದಿಗಂತ್, ಅನಂತ್ ನಾಗ್ ಒಂದೆಡೆ. ಇವರಿಬ್ಬರು ಸಮುದ್ರದಡದಲ್ಲಿ ಮನೆಯಲ್ಲಿ ನೊಣ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಕಾಫಿ ಕಪ್ ನೋಡುವ ಗಂಡಿನ, ಗ್ಯಾಸ್ ತಡೆದುಕೊಂಡು ನಿಂತ ಹುಡುಗಿಯ ತಂದೆಯ ಬಗೆಗೆ ಹಾಸ್ಯ ಮಾಡುತ್ತ ಕೂತಿರುತ್ತಾರೆ. ಲೈಫು ಇಷ್ಟೇನೇ ಇಷ್ಟೇನೇ ಎಂದು ಇಬ್ಬರೂ ಆರ್ಷೇಯ, ಪುರಾತನ, ಸ್ಟೇಟಸ್ಸು ಎಂದು ಇರುವುದನ್ನೆಲ್ಲಾ ಗೇಲಿ ಮಾಡುತ್ತಿರುತ್ತಾರೆ. ಇನ್ನೊಂದೆಡೆ ಮನೆಯ ಹೊರಗೆ ತಂತಿಯ ಮೇಲೆ ಅಂಡರ್ ವೇರ್ ಒಣಗಲು ಹಾಕುವ ಬಸ್ ಡ್ರೈವರ್ ಯಜಮಾನಿ ಓದುವ ರ್ಯಾಪಿಡೆಕ್ಸ್ ನಿಂದ ತಾನೇ ಇಂಗ್ಲೀಷ್ ಕಲಿತ ಮನೆ ಕೆಲಸದವಳಿಗೆ ಒಂದೇ ಸಾಲಲ್ಲಿ ತಾನು ಹೊರಗೆ ಒಳಗಲು ಹಾಕಿದ ಒಣ ವಸ್ತ್ರದ ಹಾಗೆಯೇ ನೇರವಾಗಿ ಮದುವೆಯಾಗುವೆಯಾ ಅನ್ನುತ್ತಾನೆ. ಆಕೆ ಒಪ್ಪಿ ಮದುವೆಯೂ ಆಗ್ತಾಳೆ.

ಸ್ವಂತ ದುಡಿಮೆಯಿಲ್ಲದ, ಕುರುಡು ತಂದೆಯ ಬಸ್ ಓಡಿಸಿಕೊಂಡಿದ್ದ ಮಗ ತನಗೆ ಮದುವೆ ಮಾಡೆಂದು ಅಪ್ಪನಿಗೆ ಗದರುತ್ತಾನೆ. ಜಾಡಿಸಿ ಒದ್ದು ಹೃದಯ ಒಡೆದು ಹಾಕ್ತೀನಿ ಅಂತ ಅಪ್ಪ ಅಬ್ಬರಿಸುತ್ತಾನೆ. ಆದರೆ ಮರುದಿನ ಅವರಿಬ್ಬರೂ ಯಾರಿಗೂ ತಿಳಿಯದೆ ಮದುವೆಯಾಗಿ ಬಂದಾಗ ಅಪ್ಪ ತಣ್ಣಗೆ ಹರಸುತ್ತಾನೆ. ಈ ತಂದೆ ಮಕ್ಕಳ ವರ್ತನೆಯು ಹಿನ್ನೆಲೆಯಲ್ಲಿದ್ದರೆ ಸ್ಕ್ಯಾಂಡಲಿನಲ್ಲಿ ಸಿಕ್ಕಿಬಿದ್ದ ತಮ್ಮನನ್ನು ನೆನೆದು ಅಧಿಕ ಪ್ರಸಂಗಿ ನಾಯಕನ ಕೆನ್ನೆಗೆ ಬಾರಿಸುವ ತಾಯಿ, ಮಗನು ಬೇರಾರನ್ನೋ ಇಷ್ಟ ಪಟ್ಟ ಸಂಗತಿ ತಿಳಿದು ಆತನ ಕೆನ್ನೆಗೆ ಬಾರಿಸುವ ತಂದೆ ಇವೆಲ್ಲ ಮುನ್ನೆಲೆಯಲ್ಲಿ ಜರುಗುತ್ತವೆ.

‘ಯಾರೂ ಅಷ್ಟು ಸುಲಭಕ್ಕೆ ನನಗೆ ಇಷ್ಟವಾಗಲ್ಲ. ನೀನು ಹೇಗೋ ಇಷ್ಟವಾಗಿದ್ದೀಯ… ಒಪ್ಪಿಕೊಂಡು ಬಿಡು. ಬೇರೊಬ್ಬನನ್ನು ಶುರುವಿನಿಂದ ಪ್ರೀತಿಸೋದು ಮಹಾ ಬೋರು… ಒಂದ್ಸಲ ಈಗ ನೀನು ಒಪ್ಪಲಿಲ್ಲ ಅಂದರೆ ಮತ್ತೆ ನೀನು ಬಂದರೂ ಚಪ್ಪಲಿಯಲ್ಲಿ ಒದ್ದು ಓಡಿಸುತ್ತೇನೆ’ ಎನ್ನುವ ನಾಯಕಿ ಸಿನೆಮಾಗಳಲ್ಲಿ ಪ್ರೀತಿ ಎಂಬ ಬಳಸಿ ಸವೆದ ವಸ್ತುವಿಗೆ ಹೊಸತೇ ಹೊಳಪು ನೀಡಿ ಬಿಡುತ್ತಾಳೆ. ಪ್ರೀತ್ಸೆ ಪ್ರೀತ್ಸೆ ಎಂದು ಅರಚುತ್ತ ಓಡುವ ರೋಮಿಯೋಗಳಿಗೆ ಟೇಬಲ್ ತಿರುಗಿದೆ ಎಂದು ಈ ಸಿನೆಮಾ ಅರಿವು ಮಾಡಿಕೊಡುತ್ತದೆ.

ಎಂದಿನಂತೆ ಯೋಗರಾಜ್ ಭಟ್ಟರು ಉತ್ತಮ ಸಂಗೀತ, ಅತ್ಯುತ್ತಮ ಛಾಯಾಗ್ರಹಣ, ಮನಮೋಹಕ ಲೊಕೇಶನ್ನು, ಗುಂಗು ಹಿಡಿಸುವ ಗೀತ ಸಾಹಿತ್ಯ, ಮನರಂಜಿಸುವ ಸಂಭಾಷಣೆಗಳ, ಲವಲವಿಕೆಯ ಪೋಷಕ ಪಾತ್ರಗಳ ಪ್ಯಾಕೇಜನ್ನು ಪಂಚರಂಗಿಯಲ್ಲೂ ನೀಡಿದ್ದಾರೆ. ಕಾಯ್ಕಿಣಿ ದಿಗಂತ್ ಸಂಭಾಷಣೆಯ ಸನ್ನಿವೇಶ, ನಾಯಕಿ ಆಕೆಯ ಅಕ್ಕ ಜಗಳ ಮಾಡುವ ಸನ್ನಿವೇಶ ಹೊರತು ಪಡಿಸಿದರೆ ಉಳಿದಂತೆ ಎಲ್ಲೆಡೆ ಭಟ್ಟರ ಪಂಚಿಂಗ್ ಡೈಲಾಗುಗಳನ್ನು ಅದೇ ಫೋರ್ಸಿನಲ್ಲಿ ಎಲ್ಲಾ ನಟರು ಡೆಲಿವರ್ ಮಾಡಿದ್ದಾರೆ. ಎಂ.ಎ ಫಿಲಾಸಫಿ ಹುಡುಗನ, ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಹುಡುಗಿಯ ಬಾಯಲ್ಲಿ ಭಟ್ಟರು ಸಮಕಾಲೀನ ಬದುಕಿಗೆ ಭಾಷ್ಯವನ್ನೇ ಬರೆಸಿದಿದ್ದಾರೆ…

ಪಾಂ ಪಾಂ … ಹಾರ್ನ್ ಒಕೆ,.. ಸೈಡ್ ಪ್ಲೀಸ್…

September 4, 2010

ಹೊಸ ಚಿಗುರು ಮೂಡಿಸುವಲ್ಲಿ ಯಶಸ್ವಿಯಾದ ‘ಮತ್ತೆ ಮುಂಗಾರು’

mtte mungaruಮನುಷ್ಯ ಸಂಬಂಧಗಳು ಹಾಗೂ ಮನುಷ್ಯನ ಬದುಕಿನ ಮೌಲ್ಯಗಳನ್ನು ಪರೀಕ್ಷೆಗೊಳಪಡಿಸುವ, ಆತನ  ಅಂತಃಸತ್ವವನ್ನು ಕೃತಿಯ ಮೂಲಕ ಹೊರತೆಗೆಯುವ ಯತ್ನ ಎಲ್ಲಾ ಕಲಾಪ್ರಕಾರಗಳಲ್ಲೂ ನಡೆಯುತ್ತ ಬಂದಿರುವಂಥದ್ದೇ. ಮನುಷ್ಯ ಪ್ರಕೃತಿಯ ಬಗ್ಗೆ ಕವನ ಬರೆದರೂ, ರಸ್ತೆಯ ಮಧ್ಯೆ ಬಿದ್ದ ಏಕಾಂಗಿ ಚಪ್ಪಲಿಯ ಕತೆಯನ್ನು ಬರೆದರೂ, ಬೀದಿ ನಾಯಿಯೊಂದರ ಆತ್ಮಚರಿತ್ರೆಯನ್ನು ಬರೆದರೂ ಅಲ್ಲಿ ಅನಾವರಣವಾಗುವುದು ಮನುಷ್ಯನೇ, ಆತನ ಭಾವಲೋಕವೇ…

ಕತೆ, ಕಾದಂಬರಿಗಳಲ್ಲಿ ಸಾಹಿತಿಗಳು ಮನುಷ್ಯನ ಭಾವಲೋಕವನ್ನು ಸಾಧ್ಯವಿರುವ ಆಯಾಮಗಳಲ್ಲೆಲ್ಲಾ ಪ್ರವೇಶಿಸಿ ಅನ್ವೇಷಿಸುವ ಯತ್ನವನ್ನು ಮಾಡುತ್ತಾ ಬಂದಿದ್ದಾರೆ. ಅವೇ ಪ್ರೀತಿ, ಪ್ರೇಮ, ದಯೆ, ಅನುಕಂಪ, ದೇಶಪ್ರೇಮ, ಸ್ವಾಭಿಮಾನ, ಆತ್ಮವಿಶ್ವಾಸ ಮೊದಲಾದ ಮಾನವ ಭಾವನೆಗಳನ್ನು ಸಾಧ್ಯವಾದಷ್ಟು ವಿಭಿನ್ನವಾದ ನೆಲೆಗಟ್ಟಿನಲ್ಲಿ ನಿಂತು ನಿರೂಪಿಸುವ ಪ್ರಯತ್ನ ಮಾಡಿದ್ದಾರೆ. ಹೀಗಾಗಿ ಕನ್ನಡವೂ ಸೇರಿದಂತೆ ಸಾಹಿತ್ಯದಲ್ಲಿ ವಿಫುಲವಾದ ಬೆಳೆಯಿದೆ ಎನ್ನಬಹುದು.

ಇದೇ ಬಗೆಯ ಪ್ರಯತ್ನಶೀಲತೆಯನ್ನು ನಾವು ಸಿನೆಮಾದಲ್ಲಿ ಹುಡುಕಲು ಹೊರಟರೆ ಕನ್ನಡದ ಚಿತ್ರರಂಗ ಭಾರಿ ನಿರಾಶೆಯನ್ನುಂಟು ಮಾಡುತ್ತದೆ. ಮೂರು ತಾಸಿನ ಸಿನೆಮಾ ಎಂದರೆ ಇಪ್ಪತ್ತರ ಆಸುಪಾಸಿನ ಮುದ್ದು ಮುಖದ ನಟಿ, ಅವಳ ಬೆನ್ನ ಹಿಂದೆ ಬೀಳುವ ಬಲಿಷ್ಠ ತೋಳುಗಳ, ಹಾಡು, ನೃತ್ಯ, ಫೈಟು, ಡೈಲಾಗ್ ಡಿಲಿವರಿ ಬಲ್ಲ ನಾಯಕ ಇಷ್ಟೇ ಆಗಿರುತ್ತದೆ. ಅವರಿಬ್ಬರ ಪ್ರೀತಿಯೇ ಸಿನೆಮಾ ಜಗತ್ತಿನ ಜೀವಾಳ. ಯಾವುದೇ ಮನುಷ್ಯನ ಬದುಕಿನಲ್ಲಿ ಹೆಣ್ಣು ಗಂಡಿನ ನಡುವಿನ ಪ್ರೀತಿ, ರೊಮ್ಯಾನ್ಸುಗಳು ಆತನ ಬದುಕಿನ ಒಂದು ಘಟ್ಟವಷ್ಟೇ ಆಗಿರುತ್ತದೆ. ಪ್ರೀತಿಯೇ ಜೀವನ ಎಂದು ಒಂದು ಕಾಲಘಟ್ಟದಲ್ಲಿ ಭಾಸವಾದರೂ ಬದುಕಿನ ಬಂಡಿ ಎಳೆಯುವುದಕ್ಕೆ ನೊಗಕ್ಕೆ ಕತ್ತು ಕೊಡಲೇಬೇಕಾಗುತ್ತದೆ. ಒಂದು ಸಮಯದ ರೊಮ್ಯಾನ್ಸಿನ ತೀವ್ರತೆಯಲ್ಲೇ ಆತನಿಗೆ ಜೀವನವಿಡೀ ಏಕಾಂಗಿತನ ಕಾಡುತ್ತಿರುತ್ತದೆ. ಪ್ರೀತಿಯನ್ನು ಪಡೆಯುವುದಕ್ಕಾಗಿ ಆತ ಇಡೀ ಜಗತ್ತನ್ನು ಎದುರು ಹಾಕಿಕೊಂಡಂತೆಯೇ ಸ್ವಾತಂತ್ರ್ಯಕ್ಕಾಗಿ, ತನ್ನ ಮೂಲಭೂತ ಹಕ್ಕುಗಳಿಗಾಗಿ, ತನ್ನ ಅಸ್ತಿತ್ವಕ್ಕಾಗಿ ಇಡೀ ಜಗತ್ತಿನೊಡನೆ ಸೆಣೆಸಬೇಕಾಗುತ್ತದೆ. ಸೋಲು ಖಚಿತ ಎಂದು ಗೊತ್ತಿದ್ದರೂ ಹೋರಾಟದ ಕಿಚ್ಚನ್ನು ಉರಿಸುತ್ತಿರಬೇಕಾಗುತ್ತದೆ. ದೈನಂದಿನ ಬದುಕಿನ ತಲ್ಲಣಗಳು, ಹೊಂದಾಣಿಕೆ ಮಾಡಿಕೊಳ್ಳಲು ಆಗದಷ್ಟು ವೇಗವಾಗಿ ಬದಲಾಯಿಸುವ ಹೊರಗಿನ ವಿಶ್ವದ ಜೀವನಪದ್ಧತಿ, ಮೌಲ್ಯ ವ್ಯವಸ್ಥೆಗಳು ಎಲ್ಲವೂ ಆತನನ್ನು ಅಲ್ಲಾಡಿಸುವ ಸಂಗತಿಗಳೇ. ಕನ್ನಡದ ಕಾದಂಬರಿ, ಕಥನ ಕ್ಷೇತ್ರಗಳಲ್ಲಿ ಈ ಮನುಷ್ಯ ತಲ್ಲಣಗಳನ್ನು ಸಮರ್ಥವಾಗಿ ನಿರೂಪಿಸುವ, ಗುರುತಿಸುವ ಕೆಲಸ ನಡೆದಿವೆಯಾದರೆ ಕನ್ನಡದ ಅತ್ಯಂತ ಪ್ರಭಾವಿ ಮಾಧ್ಯಮವಾದ ಸಿನೆಮಾ ಈ ದಿಸೆಯಲ್ಲಿ ತುಂಬಾ ಹಿಂದಿದೆ. ಹೊಸ ಪ್ರಯತ್ನಗಳು, ಹೊಸ ಬಗೆಯ ಚಿಂತನೆಗಳು ಕಾಣುತ್ತವೆಯಾದರೂ ಅವು ಐಸೋಲೆಟೆಡ್ ಉದಾಹರಣೆಗಳಾಗಿ ಉಳಿದುಕೊಂಡಿವೆ.

ಇಂತಹ ಸಂದರ್ಭವನ್ನು ಗಮನದಲ್ಲಿಟ್ಟುಕೊಂಡು ನಾವು ಮುಂಗಾರು ಮಳೆ, ಮೊಗ್ಗಿನ ಮನಸ್ಸು ಚಿತ್ರಗಳನ್ನು ನಿರ್ಮಿಸಿದ ಇ.ಕೃಷ್ಣಪ್ಪನವರ ಮೂರನೆಯ ಚಿತ್ರ ‘ಮತ್ತೆ ಮುಂಗಾರು’ ನೋಡಿದರೆ ಈ ಪ್ರಯತ್ನವನ್ನು ಏಕೆ ಶ್ಲಾಘಿಸಬೇಕು ಎಂಬುದು ಸ್ಪಷ್ಟವಾಗುತ್ತದೆ. ಚಿತ್ರ ತಂಡದ ಬೆನ್ನು ತಟ್ಟುವ ಆವಶ್ಯಕತೆ ಏಕಿದೆ ಎನ್ನುವುದು ಅರಿವಾಗುತ್ತದೆ.

‘ಮತ್ತೆ ಮುಂಗಾರು’ ನೈಜ ಘಟನೆಯೊಂದನ್ನು ಆಧರಿಸಿದ ಚಿತ್ರ ಎನ್ನಲಾಗುತ್ತದೆ. ಇದರ ಕತೆ ತೀರಾ ಸರಳ. ಮೀನು ಹಿಡಿಯುವುದಕ್ಕೆ ಅರಬ್ಬಿ ಸಮುದ್ರಕ್ಕೆ ಹೋದ ಬೋಟು ಚಂಡಮಾರುತಕ್ಕೆ ಸಿಕ್ಕಿಕೊಂಡು ನಿಯಂತ್ರಣ ತಪ್ಪಿ ಪಾಕಿಸ್ತಾನದ ಗಡಿಯನ್ನು ಪ್ರವೇಶಿಸುತ್ತದೆ. ಸಿಕ್ಕು ಬಿದ್ದ ಮೀನುಗಾರರನ್ನು ಅವರು ಭಾರತೀಯರು ಎಂಬ ಒಂದೇ ಕಾರಣಕ್ಕೆ ಪಾಕಿಸ್ತಾನದ ನರಕ ಸದೃಶ ಕಾರಾಗೃಹದಲ್ಲಿ ಬಂಧಿಸಿಟ್ಟು ಅಮಾನವೀಯವಾಗಿ ಹಿಂಸಿಸಲಾಗುತ್ತದೆ. ಬ್ಲ್ಯಾಕ್ ಹೋಲ್ ಎಂಬ ಕಗ್ಗತ್ತಲ ಸೆಲ್ ನಲ್ಲಿ ತಿನ್ನುವುದಕ್ಕೆ ಚಪಾತಿ, ಕುಡಿಯುವುದಕ್ಕೆ ನೀರಿರಲಿ ಗಾಳಿ ಬೆಳಕೂ ಬೇಕಾದಷ್ಟು ಇರುವುದಿಲ್ಲ. ತಮ್ಮ ನೆಲವನ್ನು, ತಮ್ಮವರನ್ನು ನೆನೆಯುತ್ತ ಶತ್ರುವಿನ ನೆಲದಲ್ಲಿ ನಾಳೆಯ ಕನಸನ್ನೇ ಮರೆತು ಇಪ್ಪತ್ತೊಂದು ವರ್ಷಕಾಲ ಬದುಕಿ ನರಳುವವರ ಕತೆಯಿದು.

ಸಾಂಪ್ರದಾಯಿಕ ಸಿನೆಮಾ ಶೈಲಿಯಂತೆಯೇ ಪ್ರೇಮಕತೆಯೊಂದಿಗೆ ಪ್ರಾರಂಭವಾಗುವ ಸಿನೆಮಾ ಹುಡುಗ ಹುಡುಗಿಯ ನಡುವಿನ ಪ್ರೀತಿಯ ಪ್ರಸ್ತಾಪವೇ ಗೌಣವಾಗಿಬಿಡುವ ಗಂಭೀರ ಸನ್ನಿವೇಶಗಳನ್ನು ಕಣ್ಣಮುಂದೆ ಸೃಷ್ಟಿಸುತ್ತಾ ಹೋಗುತ್ತದೆ. ನಮ್ಮ ದೇಶದ ಸ್ವತಂತ್ರ ಬದುಕನ್ನು ಸ್ವಚ್ಛಂದವಾಗಿ ಅನುಭವಿಸುತ್ತಾ ಮಂದಿರ, ಮಸೀದಿ, ಚರ್ಚುಗಳೆನ್ನದೆ ಎಲ್ಲೆಂದರಲ್ಲಿ ಹಾರುವ ಗೇಟ್ ವೇ ಆಫ್ ಇಂಡಿಯಾದ ಬಳಿಯ ಪಾರಿವಾಳಗಳಂತಿದ್ದ ಮನುಷ್ಯರ ಬದುಕು ರಾತ್ರಿ ಕಳೆದು ಹಗಲಾಗುವುದರಲ್ಲಿ ನರಕದ ಕೂಪವಾಗಿಬಿಡುತ್ತದೆ. ಗಾಜಿನ ಲೋಟದಲ್ಲಿ ಚಾಯ್ ಕುಡಿಯುತ್ತ, ‘ಐ ಲೈಸಾ..’ ಎಂದು ಹುರುಪಿನಿಂದ ಪದ ಹಾಡುತ್ತ ಕೆಲಸದಲ್ಲಿ ತೊಡಗಿದ್ದ ಮೀನುಗಾರರು ‘ಬೆಳಗಾಯಿತು… ಬೆಳಕಾಯಿತು… ಆ ಕಲ್ಪನೆ ಭ್ರಮೆಯಾಯಿತು, ರಾಮ ಏಸು ಅಲ್ಲಾ ಇನ್ನೂ ಬರಲೇ ಇಲ್ಲ.. ಬರುತಾರೆನ್ನೋ ಆಸೆ ಇನ್ನೂ ನಮ್ಮಲಿಲ್ಲ..’ ಎಂದು ಹಾಡುವ ಮಟ್ಟಿಗಿನ ನಿರಾಶೆಯಲ್ಲಿ ಬೀಳುತ್ತಾರೆ. ಮನುಷ್ಯ ನಾಗರೀಕತೆಯ ಉನ್ಮಾದದಲ್ಲಿ ಕಟ್ಟಿಕೊಂಡ ದೇಶ, ಸರ್ಕಾರ, ಗಡಿ ಮೊದಲಾದ ವ್ಯವಸ್ಥೆಗಳು ಹೇಗೆ ವ್ಯಕ್ತಿಗಳ ಸ್ವಾತಂತ್ರ್ಯವನ್ನು ನಿಯಂತ್ರಿಸುವ ಕೇಂದ್ರಗಳೂ ಆಗಿ ಬಿಡುತ್ತವೆ ಎನ್ನುವುದನ್ನು ಇಂತಹ ಕತೆಗಳಲ್ಲಿ ಕಾಣಬಹುದು.

ಈ ಸಿನೆಮಾದ ಬಹುದೊಡ್ಡ ಶಕ್ತಿಯೆಂದರೆ ಅದರ ತಾಂತ್ರಿಕತೆ. ಸಿನೆಮಾದಲ್ಲಿ ನಾವು ಹೇಳುವ ಕತೆ ಮುಖ್ಯವೇ ಆದರೂ ಅದರ ಸ್ಥಾನ ಎರಡನೆಯದು. ಮೊದಲ ಸ್ಥಾನದ ಪ್ರಾಮುಖ್ಯತೆಯನ್ನು ಪಡೆಯುವುದು ನಾವು ಕತೆಯನ್ನು ಹೇಗೆ ಹೇಳುತ್ತೇವೆ ಎಂಬುದು. ಸಿನೆಮಾದ ಮಾತು, ಭಾಷೆ ಎಂದರೆ ಕೇವಲ ಪಾತ್ರಗಳು ಆಡುವ ಮಾತುಗಳು ಅಲ್ಲ. ಮಾತೇ ಇಲ್ಲದೆ ಒಂದು ಲಯದಲ್ಲಿ ಇಲ್ಲವೇ ಲಯದ ಅನುಪಸ್ಥಿತಿಯಲ್ಲಿ ಒಂದರ ಪಕ್ಕ ಒಂದು ಹೆಣೆಯಲ್ಪಟ್ಟ ಶಾಟ್ ಗಳು ಸಹ ಸಿನೆಮಾ ಭಾಷೆಯಲ್ಲಿ ಕತೆಯನ್ನು ಹೇಳುತ್ತಿರುತ್ತವೆ. ವಿದೇಶದಿಂದ ಒಬ್ಬ ವ್ಯಕ್ತಿ ಮುಂಬೈಗೆ ಬಂದ ಎನ್ನುವುದನ್ನು ಹೇಳಬೇಕಿರುತ್ತದೆಂದುಕೊಳ್ಳಿ.. ತೆರೆಯ ಮೇಲೆ ನಮಗೆ ವಿಮಾನ ಟೇಕಾಫ್ ಆದದ್ದನ್ನು ತೋರಿಸಿ ಕಟ್ ಮಾಡುತ್ತಾರೆ, ಮುಂದಿನ ಶಾಟ್ ನಲ್ಲಿ ಅದು ಮುಂಬೈ ನಿಲ್ದಾಣದಲ್ಲಿ ಲ್ಯಾಂಡ್ ಆಗುತ್ತದೆ.. ಕಟ್… ಲಗೇಜು, ಟಿಕೇಟ್ ವೌಚರು ಹಿಡಿದು ಟ್ಯಾಕ್ಸಿಗಾಗಿ ಹುಡುಕಾಡುವ ದೃಶ್ಯ… ಕಟ್… ಮುಂದಿನ ಸಂಭಾಷಣೆ ಟ್ಯಾಕ್ಸಿಯಲ್ಲಿ… ಹೀಗೆ ಸಿನೆಮಾ ಭಾಷೆಯಲ್ಲಿ ದೃಶ್ಯಗಳ ಜೋಡಣೆಯಿಂದಲೂ ಕತೆ ಹೇಳಲ್ಪಡುವುದು. ಇಂತಹ ಸೂಕ್ಷ್ಮವನ್ನು ಅರಿತು ಕತೆಯನ್ನು ನಿರೂಪಿಸಿರುವುದು ‘ಮತ್ತೆ ಮುಂಗಾರು’ವಿನ ಹಿರಿಮೆ. ಉದಾಹರಣೆಗೆ, ಅರಬ್ಬಿ ಸಮುದ್ರಕ್ಕೆ ಮೀನು ಹಿಡಿಯಲೆಂದು ಹೋದ ದೋಣಿಯು ಭಯಂಕರ ಚಂಡಮಾರುತಕ್ಕೆ ಸಿಲುಕಿ ನಿಯಂತ್ರಣ ತಪ್ಪಿತು ಎನ್ನುವುದನ್ನು ಫ್ಲ್ಯಾಶ್ ಬ್ಯಾಕಿನಲ್ಲಿ ಕತೆ ಹೇಳುತ್ತಿರುವ, ತೀರ್ಥಹಳ್ಳಿಯ ಮನೆಯಲ್ಲಿ ವಿಚಾರಣೆ ಎದುರಿಸುತ್ತಿರುವ ನಾಣಿಯ ಧ್ವನಿಯಲ್ಲೇ ತಿಳಿಸಿಬಿಡಬಹುದಾಗಿತ್ತು. ‘ಆ ರಾತ್ರಿ ಎಲ್ಲಿ ಬಲೆ ಬೀಸಿದರೂ ನಮಗೆ ಮೀನುಗಳೇ ಸಿಕ್ಕಲಿಲ್ಲ…’ ಎನ್ನುವಲ್ಲಿಗೆ ನಾಣಿಯ ಧ್ವನಿಯ ಮೂಲದ ನಿರೂಪಣೆ ಕೊನೆಗೊಂಡು ಸಮುದ್ರದ ನಡುವೆ ನಿಂತ ಒಬ್ಬಂಟಿ ದೋಣಿ ಕತೆ ಮುಂದುವರೆಸುತ್ತದೆ. ಸಮುದ್ರದ ನಡುವೆ ಎಂದೂ ದೋಣಿಯಲ್ಲಿ ಹೋದ, ಚಂಡ ಮಾರುತಕ್ಕೆ ಸಿಕ್ಕ, ಅಲೆಗಳ ಹೊಡೆತಕ್ಕೆ ಒಳಗಾದ ದೋಣಿಯ ಅನುಭವವಂತೂ ಪ್ರೇಕ್ಷಕರಿಗೆ ಇರಲಿಕ್ಕೆ ಸಾಧ್ಯವೇ ಇಲ್ಲ. ಇವನ್ನೆಲ್ಲಾ ಅತ್ಯಂತ ಸೂಕ್ಷ್ಮವಾಗಿ ಕಟ್ಟಿ ಕೊಡುವ ದೃಶ್ಯ ವೈಭವದಲ್ಲೇ ಈ ಸಿನೆಮಾ ಹತ್ತರ ನಡುವೆ ಮತ್ತೊಂದು ಆಗುವ ಅಪಾಯದಿಂದ ಪಾರಾಗಿದೆ.

ಇಪ್ಪತ್ತೊಂದು ವರ್ಷಗಳ ಕಾಲ ಕಗ್ಗತ್ತಲ ಕಾರಾಗೃಹದಲ್ಲಿ ಮಲಗಲು ಹಾಸಿಗೆಯಿಲ್ಲದೆ, ಹೊದೆಯಲು ಎರಡನೆಯ ಜೊತೆ ಬಟ್ಟೆಯಿಲ್ಲದೆ, ಕುಡಿಯಲು ನೀರಿಲ್ಲದೆ, ಸ್ವಚ್ಛ ಪರಿಸರವಿಲ್ಲದೆ ಬದುಕುವ ಮನುಷ್ಯ ಬದುಕನ್ನು ನೋಡುವ ದೃಷ್ಟಿ ಎಂಥದ್ದು, ಆತನ ಮೌಲ್ಯಗಳಲ್ಲಿ ನಡೆಯುವ ಪಲ್ಲಟ ಎಂಥದ್ದು ಎನ್ನುವುದನ್ನು ಸಣ್ಣ ಸಣ್ಣ ಘಟನೆಗಳ ಮೂಲಕ ನಿರೂಪಿಸಬಹುದಾಗಿದ್ದರೂ ನಿರ್ದೇಶಕರು ಆ ಕಷ್ಟ ತೆಗೆದುಕೊಂಡಂತೆ ಕಾಣುವುದಿಲ್ಲ. ಭಾವುಕತೆಯೇ ಪ್ರಧಾನವಾದರೆ ಇಂತಹ ವಸ್ತುವಿನ ನಿರೂಪಣೆಯಲ್ಲಿ ಎಡವಿದಂತೆಯೇ. ಆ ಪಾತ್ರಗಳು ಜೀವಿಸಿರುವ ಸನ್ನಿವೇಶವೇ ಅಮಾನವೀಯವಾದದ್ದು ಹಾಗೂ ಅವರ ಕ್ಷಣ ಕ್ಷಣದ ಬದುಕೇ ಅಸಹನೀಯವಾದದ್ದು. ಹೀಗಿರುವಾಗ ಅವರ ಕಷ್ಟವನ್ನು, ಅವರ ಮಾನಸಿಕ ಯಾತನೆಯನ್ನು ಕ್ಲೋಸ್ ಅಪ್ ಶಾಟುಗಳಲ್ಲಿ ತೋರಿಸುವ ಅವಶ್ಯಕತೆಯಿರುವುದಿಲ್ಲ. ಬ್ಲ್ಯಾಕ್ ಹೋಲ್ ನಂತಹ ಇಲಿಯ ಬಿಲದಲ್ಲಿ ಜೀವಂತ ಹೂತು ಹಾಕಲ್ಪಟ್ಟ ಖೈದಿಗಳ ಬಗ್ಗೆ ಅನುಕಂಪ ಬರುವಂತೆ ಪಾತ್ರಗಳನ್ನು ಅಳಿಸುವುದು, ಪಾತ್ರಗಳು ತಮ್ಮೆಲ್ಲ ವೇದನೆಯನ್ನು ಮುಖಭಾವದಲ್ಲಿ ತೋರ್ಪಡಿಸುವಂತೆ ಮಾಡುವುದು ಕೊಂಚ ನಾಟಕೀಯವೆನಿಸುತ್ತದೆ. ಇದಕ್ಕೆ ಬದಲಾಗಿ ಸಣ್ಣ ಸಣ್ಣ ಅಥೆಂಟಿಕ್ ಆದ ಘಟನೆಗಳನ್ನು ಜೋಡಿಸುತ್ತಾ ಹೋಗಿದ್ದರೆ ನಿರೂಪಣೆ ಮಧ್ಯೆ ಎಲ್ಲೂ ಬೋರ್ ಹೊಡೆಸುತ್ತಿರಲಿಲ್ಲ ಎನ್ನಿಸುತ್ತದೆ. ಈ ಅಂಶವನ್ನು ನಿರ್ದೇಶಕರು ಸಂಪೂರ್ಣ ಕಡೆಗಣಿಸಿದ್ದಾರೆ ಎಂದೇನಿಲ್ಲ. ಸೆರೆಮನೆಯಲ್ಲಿನ ಒಂದೇ ನಲ್ಲಿಗೆ ಬಾಯಿ ಹಾಕಿ ಹೀರಿದರೂ ಒಂದೇ ಒಂದು ಹನಿ ನೀರು ಸಿಕ್ಕದಿರುವಾಗ ಖೈದಿಯು ತನ್ನದೇ ಮೂತ್ರವನ್ನು ಕುಡಿಯುವ ದೃಶ್ಯ, ಅಪ್ಪಟ ಸಸ್ಯಾಹಾರಿಯಾಗಿದ್ದವ ಓಡುವ ಜಿರಲೆಯನ್ನು, ಇಲಿಯನ್ನು ಹಿಡಿದು ತಿನ್ನುವುದು, ಎಲ್ಲಿಂದಲೋ ಹಾರಿಬಂದು ಕೂತ ಪಾರಿವಾಳ ತಿನ್ನುವುದಕ್ಕೆ ಮುಂದಾಗುವುದು – ಇಂತಹ ಘಟನೆಗಳು ಹೆನ್ರಿ ಛಾರಿರಿಯ ಪ್ಯಾಪಿಲಾನ್ ನಂತಹ ಕಥನಗಳಲ್ಲಿ ಹೇರಳವಾಗಿ ದೊರೆಯುತ್ತವೆ. ಅವನ್ನು ಸಮರ್ಥವಾಗಿ ಬಳಸಿಕೊಳ್ಳಬೇಕಿತ್ತು ಎನ್ನುವುದು ನನ್ನ ಅನಿಸಿಕೆ.

ಚಿತ್ರದ ಬಹುಪಾಲು ಭಾಗವನ್ನು ಅತ್ಯಂತ ಕಡಿಮೆ ಬೆಳಕಿನಲ್ಲಿ ಚಿತ್ರೀಕರಿಸುವುದೂ ಒಂದು ಪ್ರಮುಖ ಅಂಶ. ಸೆರೆಮನೆಯ ಒಂದೇ ಒಂದು ಕೋಣೆಯನ್ನು ಮುಕ್ಕಾಲು ಪಾಲು ಸಿನೆಮಾದಲ್ಲಿ ತೋರಿಸಿದರೂ ಅದು ಅಪರಿಚಿತವಾಗಿಯೇ ಉಳಿಯುವಂತೆ ನೋಡಿಕೊಂಡಿರುವುದು ತಂತ್ರಜ್ಞರ ಕುಶಲತೆಯನ್ನು ತೋರುತ್ತದೆ. ಸಿನೆಮಾ ಕಣ್ಣ ಮುಂದೆ ಬಿಚ್ಚಿಕೊಳ್ಳುತ್ತಾ ಹೋದಂತೆ ಆ ಸೆರೆ ಮನೆಯಲ್ಲಿ ಕೇವಲ ಭಾರತೀಯ ಮೀನುಗಾರರು ಬಂಧಿತವಾಗಿಲ್ಲ ನೋಡುವ ಪ್ರೇಕ್ಷಕರಾದ ನಾವೂ ಬಂಧಿಗಳೂ ಎನ್ನುವ ಅನುಭವ ಕೊಡುವುದರಲ್ಲಿ ತಕ್ಕ ಮಟ್ಟಿಗಿನ ಯಶಸ್ಸನ್ನು ಕಂಡಿದ್ದಾರೆ. ಬೆಳಗಿಗಾಗಿ, ಬೆಳಕಿಗಾಗಿ ಖೈದಿಗಳು ಹಂಬಲಿಸುವಂತೆ ಪ್ರೇಕ್ಷಕರೂ ಹಂಬಲಿಸಿದ್ದರೆ ಅದು ನಿಜಕ್ಕೂ ಚಿತ್ರ ತಂಡದ ಪ್ರಯತ್ನ ಸಾರ್ಥಕವಾದದ್ದರ ದ್ಯೋತಕ.

ಇಡೀ ಸಿನೆಮಾಗೆ ಹೊಸ ಹೊಳಪನ್ನು ಕೊಡುವುದು ಪಾತ್ರಗಳ ನೈಜತೆ. ಆ ನೈಜತೆಯನ್ನು ತರುವುದಕ್ಕಾಗಿ ನಟರು ಪಟ್ಟಿರುವ ಶ್ರಮ. ತೀರ್ಥಹಳ್ಳಿಯ ಹವ್ಯಕ ಮಾತಾಡುವ, ದಣಿದು ‘ಮಂಜುನಾಥಾ…’ ಎನ್ನುತ್ತ ಕೂರುವ ನಾಣಿಯ ತಾಯಿಯ ಪಾತ್ರದಿಂದ ಹಿಡಿದು ಮೈ ಮಾರಾಟಕ್ಕೆ ಇಳಿದ ಹುಡುಗಿಯ ಆಂಗಿಕ ಅಭಿನಯ, ಮುಖ ಭಾವ ಮೊದಲಾದವುಗಳೆಲ್ಲಾ ಚಿತ್ರವನ್ನು ಎತ್ತರಕ್ಕೆ ಕೊಂಡೊಯ್ಯುತ್ತವೆ.

ಬಿರಿದ ನೆಲದಿಂದ ಚಿಗುರನ್ನು ಹೊಮ್ಮಿಸುವ ಮಾಂತ್ರಿಕ ಶಕ್ತಿಯ ಮುಂಗಾರು ಮಳೆಗಾಗಿ ಕಾತರದಿಂದ ರೈತರು ಆಗಸ ನೋಡುವಂತೆ ಈ ಚಿತ್ರದ ಪಾತ್ರಗಳು ತಮ್ಮ ಬದುಕಿನಲ್ಲೆ ಮತ್ತೆ ಹಸಿರುನ ಚಿಗುರಿಗಾಗಿ ‘ಮತ್ತೆ ಮುಂಗಾರು’ ಸುರಿಯುವುದಕ್ಕಾಗಿ ಹಪಹಪಿಸುವುದು ಮನಮುಟ್ಟುವಂತಿದೆ. ಈ ‘ಮತ್ತೆ ಮುಂಗಾರು’ ಕನ್ನಡ ಚಿತ್ರರಂಗದಲ್ಲೂ ಹಸಿರನ ಹೊಸ ಚಿಗುರು ಮೂಡಿಸುವಲ್ಲಿ ಯಶಸ್ವಿಯಾಗಿದೆ.

September 4, 2010

ಕೃಷ್ಣನ್ ಲವ್ ಸ್ಟೋರಿ ಸಂವಾದ ನಾನು ಕಂಡಂತೆ

ಜನಪ್ರಿಯವಾದ ಮುಖ್ಯವಾಹಿನಿಯ ಸಿನೆಮಾಗಳ ಕುರಿತು ಅಕಾಡೆಮಿಕ್ ಶಿಸ್ತಿನಲ್ಲಿ ಚರ್ಚೆಗಳು ನಡೆಯುವಂತಹ ವಾತಾವರಣ ಕನ್ನಡದಲ್ಲಿ ಸೃಷ್ಟಿಯಾಗಬೇಕು. ಭಾರಿ ಪ್ರಮಾಣದ ಪ್ರಭಾವವನ್ನು ಉಂಟು ಮಾಡಬಲ್ಲ ಸಿನೆಮಾ ಎಂಬ ಮಾಧ್ಯಮದಲ್ಲಿ ನಡೆಯುತ್ತಿರುವ ಪ್ರಯತ್ನಗಳಿಗೆ, ಘಟಿಸುತ್ತಿರುವ ಸ್ಥಿತ್ಯಂತರಗಳಿಗೆ ಕನ್ನಡದಲ್ಲಿ ಯಾವ ಮಟ್ಟದ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ? ಪ್ರಜ್ಞಾವಂತಿಕೆಯ ಪ್ರತಿಸ್ಪಂದನೆ ದೊರೆಯುತ್ತಿದೆಯೇ ಎನ್ನುವ ಪ್ರಶ್ನೆಗಳನ್ನು ಕೇಳಿಕೊಂಡರೆ ಸಂವಾದದಂತಹ ಪ್ರಯತ್ನಗಳ ಆವಶ್ಯಕತೆ ನಿಚ್ಚಳವಾಗಿ ಕಾಣುತ್ತದೆ. kls1

“ಕೃಷ್ಣ”ನ್ ಲವ್ ಸ್ಟೋರಿ, ‘ಫುಲ್ ಫೀಲಿಂಗ್ ಮಗಾ’ ಸಿನೆಮಾದ ಸಂವಾದ ಕೂಡ ಪಾಪ್ಯುಲರ್ ಚಿತ್ರವೊಂದನ್ನು ಗ್ರಹಿಸುವ, ಅದಕ್ಕೆ ಪ್ರತಿಕ್ರಿಯಿಸುವ ಸಾಂಪ್ರದಾಯಿಕ ಪದ್ಧತಿಯನ್ನು ಪ್ರಶ್ನಿಸುವ, ಹೊಸ ಪದ್ಧತಿಯನ್ನು ಅನ್ವೇಷಿಸುವ ಪ್ರಯತ್ನವಾಗಿ ಜರುಗಿತು. ಸಿನೆಮಾ ಪ್ರದರ್ಶನದಲ್ಲಿ ಭಾಗವಹಿಸಿದಷ್ಟು ಸಂಖ್ಯೆಯಲ್ಲಿ ಸಂವಾದದಲ್ಲಿ ಪ್ರೇಕ್ಷಕರು ಭಾಗವಹಿಸಿರಲಿಲ್ಲ. ಇದಕ್ಕೆ ಪ್ರಚಾರದ ಕೊರತೆಯ ಜೊತೆಗೆ ‘ಸಂವಾದ’ದ ಸ್ವರೂಪದ ಬಗ್ಗೆ ಮಾಹಿತಿಯ ಕೊರತೆಯೂ ಕಾರಣವೆನಿಸುತ್ತದೆ, ಅರವತ್ತು ತುಂಬಿದವರಿಗೆ ಅಭಿನಂದನಾ ಗ್ರಂಥ ಅರ್ಪಿಸುವಂತೆ ಬಹುತೇಕ ಚಿತ್ರ ಸಂವಾದಗಳು ಜರುಗುವುದರಿಂದ, ಚಿತ್ರ ನಿರ್ಮಾಪರು ಹಾರ ತುರಾಯಿಗಳೊಂದಿಗೆ ಬೆನ್ತಟ್ಟುವಿಕೆಯನ್ನೂ ವಿನಿಯಮ ಮಾಡಿಕೊಳ್ಳುವುದಕ್ಕೆ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದರಿಂದ ಸಂವಾದ. ಡಾಟ್ ಕಾಮ್‌ನ ಕಾರ್ಯಕ್ರಮದ ಬಗ್ಗೆ ಜನರು ಅನಾಸಕ್ತಿ ತೋರಿಸುವುದು ಸಾಮಾನ್ಯ ಅನ್ನಿಸುತ್ತದೆ. ಕಾರ್ಯಕ್ರಮದ ಪ್ರಾರಂಭದ ಮುನ್ನವೇ ಚಿತ್ರ ತುಂಬಾ ಚೆನ್ನಾಗಿತ್ತು, ಹತ್ತು ಸಲ ನೋಡಿದೆ, ಹೀರೋ ಸೂಪರ್ ಎನ್ನುವಂತಹ ಅಭಿನಂದನೆಗಳು ಬೇಡ, ಚಿತ್ರ ತಂಡವನ್ನು uncomfortable zoneಗೆ ತಳ್ಳಿ ಎಂದ ಪ್ರಸ್ತಾವನೆಯ ಬಗ್ಗೆ ಪ್ರಚಾರ ದೊರೆಯಬೇಕಿದೆ. ಇಂಥ ಹೆಚ್ಚು ಸಂವಾದ ಕಾರ್ಯಕ್ರಮಗಳು ನಡೆದರೆ ಕ್ರಮೇಣ ಆ ತಿಳುವಳಿಕೆ ಹರಡುವುದು ಎಂದು ಆಶಿಸಬಹುದು.

ಸಂವಾದದ ಮೊದಲ ಭಾಗದಲ್ಲಿ ಚಿತ್ರ ತಂಡದೊಂದಿಗೆ ಸಂವಾದ.ಡಾಟ್ ಕಾಮ್ ಚರ್ಚೆಗೆ ತೊಡಗಿತು. ಕೃಷ್ಣನ ಲವ್ ಸ್ಟೋರಿಯನ್ನು ಪ್ರೀತಿ, ಪ್ರಣಯದ ಅಂಶಗಳನ್ನು ಬದಿಗಿಟ್ಟು ವಿಮರ್ಶಿಸಿದ ಶೇಖರ್ ಪೂರ್ಣರವರು ಈ ಚಿತ್ರ ಮೇಲ್ ಮಧ್ಯಮ ವರ್ಗ ಹಾಗೂ ಕೆಳಮಧ್ಯಮ ವರ್ಗಗಳ ನಡುವಿನ ವರ್ಗ ಸಂಘರ್ಷವನ್ನು ಬಿಂಬಿಸುವ ಸಿನೆಮಾ ಎನ್ನುವ ಮೂಲಕ ಚಿತ್ರದ ವಿಮರ್ಶೆಗೆ ಹೊಸ ಆಯಾಮವನ್ನು ಕೊಟ್ಟರು. ಗಾರ್ಮೆಂಟ್ಸ್ ನಲ್ಲಿ ದುಡಿಯುವ ಕೆಳಮಧ್ಯಮ ವರ್ಗದ ಉಮಾಶ್ರೀಯ ಬದುಕು ಹಾಗೂ ಕುಟುಂಬ ಬೊಟಿಕ್ ಶಾಪ್ ಇಟ್ಟು ಅದೇ ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ತಯಾರಾಗುವ ಬಟ್ಟೆಗಳನ್ನು ಮಾರುವ ಮೇಲ್ಮಧ್ಯಮ ವರ್ಗದ ಕೃಷ್ಣನ ಬದುಕಿನಿಂದ ಹೇಗೆ ನಲುಗುತ್ತದೆ ಎನ್ನುವುದನ್ನು ಚಿತ್ರ ಹೇಳುತ್ತದೆ ಎಂದು ವಿವರಿಸಿದರು.

ತನ್ನ ಅಂತಸ್ಥಿನ ಅರಿವಿದ್ದೂ, ಬಡತನವನ್ನು ಹೆಗಲ ಮೇಲಿನ ಹೊರೆಯೆಂಬಂತೆ ಕಾಣದೆ ರೆಕ್ಕೆಗಳಿಗೆ ಹಾಕಿದ ಸರಪಳಿ ಎಂದು ಭಾವಿಸಿ ತನ್ನ ಆಸೆಗಳನ್ನು ಹತ್ತಿಕ್ಕಿಕೊಂಡು ಸ್ವಾಭಿಮಾನಿಯಾಗಿ ಬದುಕುವವಳು ನಾಯಕಿ ಗೀತಾ. ಆಕೆಯನ್ನು ಕೊಲ್ಲುವುದು ಆಕೆಯ ಪಶ್ಚಾತಪವಾಗಲಿ, ಪಾಪಪ್ರಜ್ಞೆಯಾಗಲಿ ಅಲ್ಲ, ಆಕೆಯನ್ನು ಪ್ರೀತಿಸುತ್ತಿದ್ದ ಕೃಷ್ಣನ ಡಬಲ್ ಸ್ಟ್ಯಾಂಡರ್ಡ್ ಎನ್ನುವ ಮೂಲಕ ಸಣ್ಣ ಆಘಾತವನ್ನು ನೀಡಿದರು. ನೀನು ತಪ್ಪು ಮಾಡಿದರೂ, ಪಾಪವನ್ನು ಮಾಡಿದ್ದರೂ ನಿನ್ನ ಪಶ್ಚಾತಾಪ ಪಟ್ಟಿರುವೆ. ಹೀಗಾಗಿ ನೀನು ಒಳ್ಳೆಯವಳು. ಒಳ್ಳೆಯವರಿಗಷ್ಟೇ ಪಶ್ಚಾತಾಪವಿರಲಿಕ್ಕೆ ಸಾಧ್ಯ ಎನ್ನುವ ಕೃಷ್ಣ ಆಕೆಯನ್ನು ತೆರೆದ ಬಾಹುಗಳಲ್ಲಿ ಸ್ವೀಕರಿಸಲು ಸಿದ್ಧನಾದರೂ ಆಕೆ ಮಾಡಿದ್ದು ‘ಪಾಪ’(sin) ಎನ್ನುವುದನ್ನು ಆಡಿತೋರಿಸುತ್ತಾನೆ. ತಪ್ಪಿತಸ್ಥಳೂ, ಪಾಪಿಯೂ, ಕಳಂಕಿತೆಯೂ ಆದ ನಿನ್ನನ್ನು ನಾನು ಸ್ವೀಕರಿಸುವೆ ಎನ್ನುವ ಕೃಷ್ಣನ ಔದಾರ್ಯವೇ ಗೀತಾ ಪಾಲಿಗೆ ಉರುಳಾಗುತ್ತದೆ. ಗೆಲುವಿನ ಭಿಕ್ಷೆ ನೀಡಿದರೆಂಡು ತಾನು ಅಣ್ಣನ ಜೇಬಿನಿಂದ ಕದ್ದು ತಂದ ಹಣದಲ್ಲಿ ಐಸ್ ಕ್ರೀಮ್ ಕೊಡಿಸಿ ಮುದ್ದು ಮಾಡುವ ಮಕ್ಕಳನ್ನೇ ಹೊಡೆಯುವ ಗೀತಾ ಕೃಷ್ಣನ ಪ್ರೀತಿಯನ್ನು, ಅದರ ಔದಾರ್ಯವನ್ನು ಸಹಿಸಲಾಗದೆ ಸಾಯುವಳು ಎನ್ನುವ ರೀಡಿಂಗ್ ಕೊಟ್ಟರು.

ಆದರೆ ಇದನ್ನೊಪ್ಪದ ಚಿತ್ರ ನಿರ್ದೇಶಕ ಶಶಾಂಕ್ ಹಾಗೂ ನಾಯಕ ಅಜಯ್ ರಾವ್ ಸಮಚಿತ್ತದಿಂದಲೇ ಕೃಷ್ಣನ ಪ್ರೀತಿಯ ಆಳವನ್ನು ವಿವರಿಸಿದರು. ಕ್ರಿಕೆಟ್ ಆಡುವ, ಕಿರಾಣಿ ಅಂಗಡಿಯಿಂದ ಮನೆ ನಡೆಯುವ, ಅಜ್ಜನ ಹೆಸರಿನ ಬೈಕನ್ನು ಪ್ರೀತಿಸುವ ನಮ್ಮಲ್ಲಿ ಒಬ್ಬನಂತಿರುವ ನಾಯಕ ತನ್ನ ಪ್ರೀತಿ ನಿಷ್ಕಾಮವಾದದ್ದು ಎನ್ನುವುದನ್ನು ಗೀತಾಳಿಗೆ ಅರ್ಥ ಮಾಡಿಸಲು ಪ್ರಯತ್ನಿಸುತ್ತಾನೆ ಎಂದರು. ಒಬ್ಬ ವ್ಯಕ್ತಿಯನ್ನು ಆತ ಏನಾಗಿರುವನೋ ಅದಕ್ಕಾಗಿ ಪ್ರೀತಿಸುವುದು ಶ್ರೇಷ್ಠವಾದ ಪ್ರೇಮಿಯ ಲಕ್ಷಣ. ತಮ್ಮ ಚಿತ್ರದ ನಾಯಕ ಈ ತರಹದ ಪ್ರೇಮಿ ಎಂದು ಸಮರ್ಥಿಸಿಕೊಂಡರು. ತಮ್ಮಿಡೀ ಚಿತ್ರಕತೆಯನ್ನು ತೀರಾ ಭಿನ್ನವಾಗಿ ರೀಡ್ ಮಾಡಿದರೂ ತಾಳ್ಮೆ ಕಳೆದುಕೊಳ್ಳದೆ ಅಜಯ್ ರಾವ್ ಹಾಗೂ ಶಶಾಂಕ್ ಪ್ರತಿಭಟಿಸಿದ್ದು ಸಂವಾದ ಎನ್ನುವುದು ಯಾವ ಸ್ಥರದಲ್ಲಿ ನಡೆಯಬೇಕು ಎನ್ನುವುದಕ್ಕೆ ಉದಾಹರಣೆಯಾಗಿತ್ತು.

ಗಾಂಧಿನಗರದ ಚೌಕಟ್ಟಿನಲ್ಲಿಯೇ ಚಿತ್ರ ರೂಪು ಗೊಂಡಿದ್ದರೂ ಇದು ಹೇಗೆ ಚಿತ್ರರಂಗದಲ್ಲಿನ ಹಳೆಯ ಪರಿಭಾಷೆಗಳನ್ನು ಮುರಿದಿದೆ ಎನ್ನುದನ್ನು ಶೇಖರ್ ಪೂರ್ಣ ವಿವರಿಸಿದರು. ಚಿತ್ರವನ್ನು ಅದರ ಕಥಾ ಹಂದರದ ಪರಿಧಿಯಲ್ಲೇ ಹೇಗೆ ‘ಓದು’ವುದು ಎಂದು ಮಾತನಾಡಿ ಪ್ರೇಕ್ಷಕರಿಗೆ ಪ್ರಶ್ನೆಗಳನ್ನು ಕೇಳಲು ಅವಕಾಶ ಮಾಡಿಕೊಟ್ಟರು.

ಪ್ರೇಕ್ಷಕರು ಸಹ ಚಿತ್ರ ತಂಡವನ್ನು ಇಕ್ಕಟ್ಟಿಗೆ ಸಿಲುಕಿಸುವ, ನಿರ್ದೇಶಕರೇ ಗುರುತಿಸದಿದ್ದ ಅಂಶಗಳಿಗೆ ಕಣ್ಣುತೆರೆಸುವ ಪ್ರಶ್ನೆಗಳನ್ನು ಕೇಳಿದರು. ಚಿತ್ರದ ಶೀರ್ಷಿಕೆ ಕೃಷ್ಣನ ಲವ್ ಸ್ಟೋರಿಯಾದರೂ ಇದು ಗೀತಾ ಲೈಫ್ ಸ್ಟೋರಿಯಾಗಿರುವುದು ಉದ್ದೇಶಪೂರ್ವಕವೇ ಎನ್ನುವ ಪ್ರಶ್ನೆ. ನಾಯಕಿ ಪ್ರಧಾನ ಚಿತ್ರವೆಂದು ಒಪ್ಪಿಕೊಳ್ಳಲು ನಿರಾಕರಿಸಿದ ನಿರ್ದೇಶಕರು ಎಲ್ಲಾ ಪಾತ್ರಗಳೂ ತಮ್ಮ ತೂಕ ಹೊಂದಿರುವುದಾಗಿ ನಿರೂಪಿಸಿದರು. ಸಿನೆಮಾದಲ್ಲಿರುವ, ಉಳಿದೆಲ್ಲ ಪಾತ್ರಗಳಷ್ಟೇ ಮುಖ್ಯವಾದ ‘ಹೊಂಬೇಗೌಡ’ ಎನ್ನುವ ಹೆಸರಿನ ಬೈಕಿನ ದೃಷ್ಟಿಯಿಂದ ಚಿತ್ರಕತೆಯನ್ನು ಪುನರ್ನಿರ್ಮಿಸಿ ಅಚ್ಚರಿ ಉಂಟುಮಾಡಿದ ಪ್ರಶ್ನೆ. ಎಲ್ಲರ ಕಿಸೆಯಲ್ಲಿ ಮೊಬೈಲ್ ಇದ್ದರೂ ಅತಿ ಪ್ರಮುಖವಾದ ಸುದ್ದಿಯನ್ನು ಮುಟ್ಟಿಸುವುದಕ್ಕಾಗಿ ಸೈಕಲ್ ತುಳಿದು ಬರುವ ಪಾತ್ರದ ಆವಶ್ಯಕತೆಯೇನು ಎನ್ನುವ ಪ್ರಶ್ನೆ. ತಂದೆ ತಾಯಿಗಳ ಪ್ರೀತಿಯಲ್ಲಿ, ನೆಮ್ಮದಿಯ ಕುಟುಂಬದಲ್ಲಿ ಬೆಳೆದ ನಾಯಕನ ಪಾತ್ರ ಹಾಗೂ ತಂದೆಯಿಲ್ಲದ, ಬೇಜವಾಬ್ದಾರಿಯ ರೌಡಿ ಅಣ್ಣನಿರುವ ಕುಟುಂಬದಲ್ಲಿ ಬೆಳೆದ ನಾಯಕಿಯ ಪಾತ್ರಗಳ ಮನಸ್ಥಿತಿಗಳ ನಡುವೆ ಇರುವ ವ್ಯತ್ಯಾಸ ಗುರುತಿಸಿದ ಪ್ರಶ್ನೆ. ದುಬಾರಿ ಕ್ಯಾಮರಾ ಬಳಸದೆಯೂ ಅತ್ಯುತ್ತಮ ಪರಿಣಾಮ ಬೀರುವುದಕ್ಕೆ ತಂತ್ರಜ್ಞಾನಕ್ಕಿಂತ, ತಂತ್ರಜ್ಞ ಮುಖ್ಯವಲ್ಲವೇ ಎನ್ನುವ ಪ್ರಶ್ನೆಗಳಿದ್ದಂತೆ ಚಿತ್ರದಲ್ಲಿನ ಅಂತ್ಯವನ್ನು ಒಪ್ಪದೆ ಪ್ರತಿಭಟಿಸಿದ ಪ್ರೇಕ್ಷಕರ ಪ್ರಶ್ನೆಗಳೂ ಸಂವಾದದಲ್ಲಿ ಹರಿದು ಬಂದವು. ಪ್ರೀತಿಗಿಂತ ಬದುಕು ಕಟ್ಟಿಕೊಳ್ಳುವ ಆಯ್ಕೆ ಆರಿಸಿಕೊಳ್ಳುವ ಪ್ರಬುದ್ಧತೆಯ ಗೀತಾ ಕಡೆಗೆ ಸಾವಿಗೆ ಶರಣಾದದ್ದು ಯಾಕೆ ಎಂದು ಒಬ್ಬರು ಪ್ರಶ್ನಿಸಿದರೆ, ಆಕೆಯನ್ನು ಸಾಯಿಸುವ ಮೂಲಕ ನಿರ್ದೇಶಕರು ಪ್ರೇಮಿಗಳಿಗೆ ಏನು ಸಂದೇಶ ನೀಡುತ್ತಾರೆ ಎನ್ನುವ ಸವಾಲನ್ನು ನಿರ್ದೇಶಕರು ಎದುರಿಸಬೇಕಾಯಿತು.